ನವದೆಹಲಿ: ಸುಮಾರು ಎಂಟು ವರ್ಷಗಳಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಅನರ್ಹಗೊಳಿಸಿದ್ದ ಡೆಕ್ಕನ್ ಚಾರ್ಜರ್ಸ್ ತಂಡಕ್ಕೆ ₹4800 ಕೋಟಿ ನೀಡಬೇಕು ಎಂದು ಬಾಂಬೆ ಹೈಕೋರ್ಟ್ ನೇಮಕ ಮಾಡಿದ್ದ ಆರ್ಬಿಟ್ರೇಟರ್ ತೀರ್ಪು ನೀಡಿದ್ದಾರೆ.
2012ರಲ್ಲಿ ಹೈದರಾಬಾದ್ ಮೂಲದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಟೂರ್ನಿಯಿಂದ ಕಿತ್ತುಹಾಕಿತ್ತು. ಐಪಿಎಲ್ ಟೂರ್ನಿ ಆರಂಭವಾದಾಗ ಆಡಿದ್ದ ಮೊದಲ ಎಂಟು ತಂಡದಲ್ಲಿ ಡಿಸಿ ಕೊಂಡು ಒಂದಾಗಿತ್ತು. ಆದರೆ, ಅಟಗಾರರಿಗೆ ಹಣ ನೀಡುವ ವಿಚಾರದಲ್ಲಿ ನಿಯಮ ಉಲ್ಲಂಘನೆಯ ಅರೋಪ ಹೊರಿಸಿದ್ದ ಬಿಸಿಸಿಐ ತಂಡವನ್ನು ಹೊರಗೆ ಹಾಕಿತ್ತು. ಆ ಸಂದರ್ಭದಲ್ಲಿ ತಂಡದ ಒಡೆತನ ಹೊಂದಿದ್ದ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ಲಿಮಿಟೆಡ್ (ಡಿಸಿಎಚ್ಎಲ್) ನ್ಯಾಯಾಲಯದ ಮೊರೆ ಹೋಗಿತ್ತು.
ನ್ಯಾಯಾಲಯವು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸಿ.ಕೆ. ಠಕ್ಕರ್ ಅವರನ್ನು ಆರ್ಬಿಟ್ರೇಟರ್ ಆಗಿ ನೇಮಿಸಿತ್ತು. ದೀರ್ಘ ವಿಚಾರಣೆ ನಂತರ ಡಿಸಿಎಚ್ಎಲ್ ಪರ ನಿರ್ಣಯವನ್ನು ಶುಕ್ರವಾರ ಪ್ರಕಟಿಸಲಾಯಿತು.
’ಒಂದೊಮ್ಮೆ ತೀರ್ಪಿನ ಸಂಪೂರ್ಣ ಪ್ರತಿಯು ಕೈಸೇರಿದ ಮೇಲಷ್ಟೇ ಈ ಕುರಿತು ಮಾತನಾಡಲು ಸಾಧ್ಯ. ಬಿಸಿಸಿಐ ಪದಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಮುಂದಿನ ಹೆಜ್ಜೆ ಇಡಲಾಗುವುದು‘ ಎಂದು ಬಿಸಿಸಿಐ ಪರ ವಾದ ಮಂಡಿಸಿದ್ದ ವಿರಾಜ್ ಶ್ರೀವಾಸ್ತವ್ ಅಸೋಸಿಯೇಟ್ಸ್ನ ವಿರಾಜ್ ಮನಿಯಾರ್ ಇಂಗ್ಲಿಷ್ ವೆಬ್ಸೈಟ್ಗೆ ತಿಳಿಸಿದ್ದಾರೆ.
ಈ ತೀರ್ಪನ್ನು ಪ್ರಶ್ನಿಸಿ ಬಿಸಿಸಿಐ ಸುಪ್ರೀಂ ಕೋರ್ಟ್ ಮೇಟ್ಟಿಲೇರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.