ತ್ರಿಪುರ ವಿರುದ್ಧ ಶತಕ ಸಿಡಿಸಿದ ಪಡಿಕ್ಕಲ್
ಚಿತ್ರ: @sportstarweb
ಕರ್ನಾಟಕ ಕ್ರಿಕೆಟ್ ತಂಡದ ತಾರಾ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ದೇಶೀಯ ಕ್ರಿಕೆಟ್ನಲ್ಲಿ ತಮ್ಮ ಅಮೋಘ ಲಯವನ್ನು ಮುಂದುವರೆಸಿದ್ದಾರೆ. ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ 5 ಪಂದ್ಯಗಳಲ್ಲಿ 4 ಶತಕ ಸಿಡಿಸುವ ಮೂಲಕ ಭಾರತ ತಂಡದ ಆಯ್ಕೆ ಸಮಿತಿಯ ಗಮನಸೆಳೆದಿದ್ದಾರೆ.
ಅಹಮದಾಬಾದ್ನ ನರೇಂಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ತ್ರಿಪುರ ವಿರುದ್ಧದ ಗ್ರೂಪ್ ಹಂತದ 5ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕೇಲವ 6 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಧೃತಿಗೆಡದ ಪಡಿಕ್ಕಲ್ ಅವರು ತಾಳ್ಮೆಯ ಇನಿಂಗ್ಸ್ ಕಟ್ಟಿದರು.
ಅವರು ನಾಲ್ಕನೇ ವಿಕೆಟ್ಗೆ ಸ್ಮರಣ್ ರವಿಚಂದ್ರನ್ (60 ರನ್) ಜೊತೆ ಸೇರಿ 132 ರನ್ಗಳ ಜೊತೆಯಾಟ ಆಡುವ ಮೂಲಕ ಕರ್ನಾಟಕ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಸ್ಮರಣ್ ಅವರು ಔಟ್ ಆದ ನಂತರವೂ ಅಬ್ಬರಿಸಿದ ಪಡಿಕ್ಕಲ್ ಲಿಸ್ಟ್ ಎ ಏಕದಿನ ಕ್ರಿಕೆಟ್ನಲ್ಲಿ 13ನೇ ಶತಕ ಸಿಡಿಸಿ ಮಿಂಚಿದರು. ಮಾತ್ರವಲ್ಲ, 2025–26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಳೆದ 5 ಇನಿಂಗ್ಸ್ಗಳಲ್ಲಿ 4ನೇ ಶತಕ ಸಿಡಿಸಿದ ಸಾಧನೆ ಮಾಡಿದರು.
ಕಳೆದ 5 ಇನಿಂಗ್ಸ್ಗಳಲ್ಲಿ ಪಡಿಕ್ಕಲ್ ಬ್ಯಾಟಿಂಗ್
ಜಾರ್ಖಂಡ್ ವಿರುದ್ಧ 147 ರನ್
ಕೇರಳ ವಿರುದ್ಧ 124 ರನ್
ತಮಿಳುನಾಡು ವಿರುದ್ಧ 22 ರನ್
ಪಾಂಡಿಚೇರಿ ವಿರುದ್ಧ 113 ರನ್
ತ್ರಿಪುರ ವಿರುದ್ಧ 108 ರನ್
ಅದ್ಭುತ ಲಯದಲ್ಲಿರುವ ಪಡಿಕ್ಕಲ್ ಅವರು ಜನವರಿ 11ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.