ಅಬುಧಾಬಿ:ಯುವನಾಯಕ ಕೆ.ಎಲ್. ರಾಹುಲ್ಗೆ ಕಿಂಗ್ಸ್ ಇಲೆವನ್ ತಂಡವನ್ನು ಪ್ಲೇಆಫ್ಗೆ ಕೊಂಡೊಯ್ಯುವ ಛಲದಲ್ಲಿದ್ದಾರೆ.
ಅದಕ್ಕಾಗಿ ಅವರು ಈಗ ’ಕೂಲ್ ಕ್ಯಾಪ್ಟನ್‘ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಸವಾಲನ್ನು ಮೀರಿ ನಿಲ್ಲಬೇಕಿದೆ. ಧೋನಿ ಬಳಗಕ್ಕೆ ಈಗಾಗಲೇ ಪ್ಲೇ ಆಫ್ ಬಾಗಿಲು ಮುಚ್ಚಿದೆ. ಉಳಿದಿರುವ ಒಂದು ಪಂದ್ಯವನ್ನು ಗೆದ್ದು ಸಂಭ್ರಮದೊಂದಿಗೆ ಹೊರ ನಡೆಯುವತ್ತ ಚಿತ್ತ ನೆಟ್ಟಿದೆ.
ಕಿಂಗ್ಸ್ ತಂಡಕ್ಕೆ ಶುಕ್ರವಾರ ರಾಜಸ್ಥಾನ ರಾಯಲ್ಸ್ ಎದುರು ಜಯಿಸಿದ್ದರೆ ಹಾದಿ ಸುಲಭವಾಗುತ್ತಿತ್ತು. ಕ್ರಿಸ್ ಗೇಲ್ ಭರ್ಜರಿ ಬ್ಯಾಟಿಂಗ್ ಮಾಡಿದರೂ ಬೌಲರ್ಗಳಿಂದ ಉತ್ತಮ ಆಟ ಮೂಡಿಬರಲಿಲ್ಲ. ರಾಯಲ್ಸ್ ಗೆದ್ದಿತು. ಅದರಿಂದಾಗಿ ಕಿಂಗ್ಸ್ ತಂಡ ಈಗ ಒತ್ತಡದಲ್ಲಿದೆ.
ಟೂರ್ನಿಯ ಮೊದಲ ಹಂತದಲ್ಲಿ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದ್ದ ರಾಹುಲ್ ಬಳಗವು ಎರಡನೇ ಸುತ್ತಿನಲ್ಲಿ ಸತತ ಐದು ಜಯಗಳೊಂದಿಗೆ ನಾಲ್ಕರ ಘಟ್ಟದ ಅವಕಾಶವನ್ನು ಜೀವಂತವಾಗಿಟ್ಟುಕೊಂಡಿದೆ. ರಾಹುಲ್, ಗೇಲ್, ನಿಕೊಲಸ್ ಪೂರನ್ ಅವರ ಬ್ಯಾಟಿಂಗ್, ರವಿ ಬಿಷ್ಣೋಯಿ, ಜೋರ್ಡಾನ್, ಆರ್ಷದೀಪ್ ಸಿಂಗ್ ಬೌಲಿಂಗ್ನಿಂದ ಇದು ಸಾಧ್ಯವಾಗಿದೆ.
ಆದರೆ ಚೆನ್ನೈ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ತಮ್ಮ ತಂಡ ಹೊರಬಿದ್ದರೂ ಉಳಿದ ತಂಡಗಳ ಆಟದ ಲಯ ತಪ್ಪಿಸುಲ್ಲಿ ಧೋನಿ ಯಶಸ್ವಿಯಾಗಿದ್ದಾರೆ. ಋತುರಾಜ್ ಗಾಯವಾಡ್ ಮತ್ತು ರವೀಂದ್ರ ಜಡೇಜ ಅವರ ಆಟ ರಂಗೇರಿದ್ದು ಇದಕ್ಕೆ ಕಾರಣ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳನ್ನು ಸೊಲಿಸಿ ಪಾಯಿಂಟ್ ಪಟ್ಟಿಯನ್ನು ’ರೋಚಕ‘ ಗೊಳಿಸಿದೆ.
ಸನ್ರೈಸರ್ಸ್ ಹೈದರಾಬಾದ್ (12 ಪಂದ್ಯ; 10ಅಂಕ), ಡೆಲ್ಲಿ ಕ್ಯಾಪಿಟಲ್ಸ್ (14), ಆರ್ಸಿಬಿ (14) ಕೂಡ ಪ್ಲೇ ಆಫ್ ಪ್ರವೇಶ ಇನ್ನೂ ಸ್ಪಷ್ಟವಾಗಿಲ್ಲ. ಕಿಂಗ್ಸ್ ತಂಡವು 13 ಪಂದ್ಯಗಳಿಂದ 12 ಅಂಕಗಳನ್ನು ತನ್ನ ಖಾತೆಯಲ್ಲಿಟ್ಟುಕೊಂಡಿದೆ. ನಾಲ್ಕನೇ ಸ್ಥಾನದಲ್ಲಿಯೂ ಇದೆ. ಉತ್ತಮ ರನ್ ರೇಟ್ನೊಂದಿಗೆ ಚೆನ್ನೈ ವಿರುದ್ಧ ಗೆದ್ದರೆ ಹಾದಿ ಸುಲಭವಾಗುತ್ತದೆ.
ಮೊದಲ ಸುತ್ತಿನಲ್ಲಿ ಚೆನ್ನೈ ತಂಡವು ಕಿಂಗ್ಸ್ ತಂಡವನ್ನು ಸೋಲಿಸಿತ್ತು. ಆ ಸೇಡು ತೀರಿಸಿಕೊಳ್ಳುವಲ್ಲಿ ರಾಹುಲ್ ಸಫಲರಾದರೆ, ನಾಯಕತ್ವ ವಹಿಸಿದ ಚೊಚ್ಚಲ ಐಪಿಎಲ್ನ ನಾಲ್ಕರ ಘಟ್ಟಕ್ಕೆ ಹೋದ ಹೆಗ್ಗಳಿಕೆ ಅವರದ್ದಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.