ADVERTISEMENT

‘ನನ್ನ ಹೆಲಿಕಾಪ್ಟರ್ ಶಾಟ್‌ ಮೆಚ್ಚಿದ ಧೋನಿ’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 19:11 IST
Last Updated 19 ಏಪ್ರಿಲ್ 2019, 19:11 IST
ಮುಂಬೈ ಇಂಡಿಯನ್ಸ್‌ ತಂಡದ ಆಟಗಾರ ಹಾರ್ದಿಕ್‌ ಪಾಂಡ್ಯ
ಮುಂಬೈ ಇಂಡಿಯನ್ಸ್‌ ತಂಡದ ಆಟಗಾರ ಹಾರ್ದಿಕ್‌ ಪಾಂಡ್ಯ   

ನವದೆಹಲಿ: ‘ಮಹೇಂದ್ರ ಸಿಂಗ್ ಧೋನಿ ಅವರ ಹೆಲಿಕಾಪ್ಟರ್‌ ಶಾಟ್ ಮೇಲೆ ಆಸಕ್ತಿ ಮೂಡಿತ್ತು. ಆದರೆ ಅದನ್ನು ರೂಢಿಸಿಕೊಳ್ಳಲು ಸಾಧ್ಯವೇ ಎಂಬ ಸಂದೇಹ ಮೂಡಿತ್ತು. ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ ನಂತರ ಧೋನಿ ಬಳಿ ಅಭಿಪ್ರಾಯ ಕೇಳಿದೆ. ಅವರು ಮೆಚ್ಚುಗೆ ಸೂಚಿಸಿದರು...’

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಧೋನಿ ಅವ ರದೇ ವಿಶಿಷ್ಟವಾದ ಹೆಲಿಕಾಪ್ಟರ್ ಶಾಟ್‌ ಮೂಲಕ ಇತ್ತೀಚೆಗೆ ಗಮನ ಸೆಳೆಯು ತ್ತಿರುವ ಹಾರ್ದಿಕ್ ಪಾಂಡ್ಯ ಆಡಿದ ಮಾತುಗಳು ಇವು.

ಗುರುವಾರ ರಾತ್ರಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಹಾರ್ದಿಕ್‌ ಅಮೋಘ ಆಟದ ನೆರವಿ ನಿಂದ ಮುಂಬೈ ಇಂಡಿ ಯನ್ಸ್‌ 40 ರನ್‌ಗಳಿಂದ ಗೆದ್ದಿತ್ತು. ಈ ಪಂದ್ಯದಲ್ಲಿ ವೇಗಿ ಕಗಿಸೊ ರಬಾಡ ಎಸೆತದಲ್ಲಿ ಪಾಂಡ್ಯ ಹೆಲಿಕಾಪ್ಟರ್ ಶಾಟ್ ಸಿಡಿಸಿದ್ದರು.

ADVERTISEMENT

ಇನಿಂಗ್ಸ್‌ನ ಕೊನೆಯ ಓವರ್‌ನ ಎರಡನೇ ಎಸೆತವನ್ನು ಅವರು ಹೆಲಿ ಕಾಪ್ಟರ್ ಶಾಟ್ ಮೂಲಕ ಸಿಕ್ಸರ್‌ಗೆ ಎತ್ತಿದ್ದರು. ರಬಾಡ ಹಾಕಿದ ಫುಲ್‌ ಲೆಂಗ್ತ್ ಎಸೆತವನ್ನು ಲಾಂಗ್ ಆನ್ ಮತ್ತು ಮಿಡ್‌ವಿಕೆಟ್ ಮೇಲಿಂದ ಪಾಂಡ್ಯ ಬೌಂಡರಿ ಗೆರೆಯಿಂದ ಆಚೆಗೆ ಕಳುಹಿಸಿದ್ದರು.

ಪಂದ್ಯದ ನಂತರ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ‘ಈ ಶಾಟ್‌ ಚೆನ್ನಾಗಿ ಆಡುತ್ತೇನೆ ಎಂಬ ವಿಶ್ವಾಸವಿರಲಿಲ್ಲ. ಆದರೆ ಧೋನಿ ಮೆಚ್ಚಿದ ನಂತರ ಭರವಸೆ ಮೂಡಿತು’ ಎಂದರು.

‘ಐಪಿಎಲ್‌ ಟೂರ್ನಿಯಲ್ಲಿ ಎಲ್ಲ ಪಿಚ್‌ಗಳನ್ನು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ಆದ್ದರಿಂದ ಉತ್ತಮ ಬ್ಯಾಟಿಂಗ್ ಸಾಧ್ಯವಾಗುತ್ತಿದೆ. ಲೀಗ್ ಹಂತದಲ್ಲಿ ಇನ್ನೂ ಐದು ಪಂದ್ಯಗಳು ಬಾಕಿ ಉಳಿದಿದ್ದು ಇನ್ನಷ್ಟು ಸಾಮರ್ಥ್ಯ ತೋರಲು ಸಾಧ್ಯವಾಗುವ ನಿರೀಕ್ಷೆ ಇದೆ’ ಎಂದು ಪಾಂಡ್ಯ ಹೇಳಿದರು.

ಗುರುವಾರದ ಪಂದ್ಯದಲ್ಲಿ 15 ಎಸೆತಗಳಲ್ಲಿ ಪಾಂಡ್ಯ 32 ರನ್ ಗಳಿಸಿದ್ದರು. ಮುಂಬೈ ಇಂಡಿಯನ್ಸ್‌ 5 ವಿಕೆಟ್‌ಗಳಿಗೆ 168 ರನ್‌ ಗಳಿಸಿತ್ತು. ಇದಕ್ಕೆ ಉತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್‌ 9 ವಿಕೆಟ್‌ಗಳಿಗೆ 128 ರನ್‌ ಗಳಿಸಿ ಸೋಲೊಪ್ಪಿಕೊಂಡಿತ್ತು.

ಮೊದಲ ವಿಕೆಟ್‌ಗೆ ಪೃಥ್ವಿ ಶಾ ಮತ್ತು ಶಿಖರ್ ಧವನ್ ಜೋಡಿ 49 ರನ್‌ ಸೇರಿಸಿದ್ದರು. ಇವರಿಬ್ಬರು ಔಟಾದ ನಂತರ ಯಾರಿಗೂ ಕ್ರೀಸ್‌ನಲ್ಲಿ ನೆಲೆಯೂರಲು ಆಗಲಿಲ್ಲ. ರಾಹುಲ್ ಚಾಹರ್‌ 19ಕ್ಕೆ3, ಜಸ್‌ಪ್ರೀತ್ ಬೂಮ್ರಾ 18ಕ್ಕೆ2ಮ ಹಾರ್ದಿಕ್ ಪಾಂಡ್ಯ 17ಕ್ಕೆ1, ಲಸಿತ್ ಮಾಲಿಂಗ 37ಕ್ಕೆ1, ಕೃಣಾಲ್ ಪಾಂಡ್ಯ 7ಕ್ಕೆ1 ವಿಕೆಟ್ ಕಬಳಿಸಿದ್ದರು.

‘ಮಧ್ಯಮ ಕ್ರಮಾಂಕ ಬಲಿಷ್ಠವಾಗಬೇಕು’
‘ತಂಡದ ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯಿಂದ ಆಡಬೇಕು, ಮಧ್ಯಮ ಕ್ರಮಾಂಕ ಬಲಿಷ್ಠವಾಗಬೇಕು’ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್‌ ಪ್ರವೀಣ್ ಆಮ್ರೆ ಅಭಿಪ್ರಾಯಪಟ್ಟರು.

‘ತಂಡ ಹೆಚ್ಚುವರಿಯಾಗಿ ಬಿಟ್ಟುಕೊಟ್ಟ 18 ರನ್‌ಗಳು ತಂಡದ ಸೋಲಿಗೆ ಪ್ರಮುಖ ಕಾರಣವಾದವು. ಮುಂದಿನ ಪಂದ್ಯಗಳಲ್ಲಿ ಇಂಥ ಪ್ರಮಾದ ಆಗದಂತೆ ನೋಡಿಕೊಳ್ಳಬೇಕು’ ಎಂದು ಅವರು ಹೇಳಿದರು.

‘ತವರಿನ ಪಂದ್ಯಗಳಲ್ಲಿ ಸೋಲುವುದು ಶೋಭೆಯಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಪವರ್‌ ಪ್ಲೇ ಸಂದರ್ಭದಲ್ಲಿ ತಂಡ ಉತ್ತಮ ಸಾಧನೆ ಮಾಡಲಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.