ADVERTISEMENT

ಕೆಎಸ್‌ಸಿಎ ಧಾರವಾಡ ವಲಯ ಅಂತರ ಜಿಲ್ಲಾ ಕ್ರಿಕೆಟ್:ಹುಬ್ಬಳ್ಳಿ ನಗರ ತಂಡಕ್ಕೆ ಗೆಲುವು

‘ಶತಕ’ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 14:20 IST
Last Updated 22 ಏಪ್ರಿಲ್ 2019, 14:20 IST
ಶತಕ ಗುಂಜಾಳ
ಶತಕ ಗುಂಜಾಳ   

ಹುಬ್ಬಳ್ಳಿ: ಸವಾಲಿನ ಮೊತ್ತ ಕಲೆಹಾಕಿ ಚುರುಕಿನ ಬೌಲಿಂಗ್ ಮಾಡಿದ ಹುಬ್ಬಳ್ಳಿ ನಗರ ತಂಡ, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ 16 ವರ್ಷದ ಒಳಗಿನವರ ಅಂತರ ಜಿಲ್ಲಾ ಕ್ರಿಕೆಟ್‌ ಟೂರ್ನಿಯ ಸೋಮವಾರದ ಪಂದ್ಯದಲ್ಲಿ 195 ರನ್‌ಗಳ ಸುಲಭ ಗೆಲುವು ಪಡೆಯಿತು.

ಬಿಜಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ನಗರ ತಂಡ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 269 ರನ್‌ ಕಲೆಹಾಕಿತು. ಮಾಧವ ಧಾರವಾಡಕರ (92) ಮತ್ತು ಶತಕ್ ಗುಂಜಾಳ (ಔಟಾಗದೆ 103, 160 ನಿಮಿಷ, 124ಎಸೆತ, 13 ಬೌಂಡರಿ) ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಮಾಧವ 117 ಎಸೆತಗಳನ್ನು ಎದುರಿಸಿ 12 ಬೌಂಡರಿ ಬಾರಿಸಿದರು.

ಎದುರಾಳಿ ಕಾರವಾರ ನಗರ ತಂಡ 19.4 ಓವರ್‌ಗಳಲ್ಲಿ 74 ರನ್‌ ಕಲೆಹಾಕುವಷ್ಟರಲ್ಲಿ ಆಲೌಟ್‌ ಆಯಿತು. ಎಸ್. ಜುಬಿರ್ ಮತ್ತು ರಾಜೇಂದ್ರ ಡಂಗನವರ ತಲಾ ಎರಡು, ಸುಜಲ್‌ ಪಟೇಲ್‌ ಐದು ವಿಕೆಟ್‌ ಉರುಳಿಸಿ ತಂಡದ ಸುಲಭ ಗೆಲುವಿಗೆ ಕಾರಣರಾದರು.

ADVERTISEMENT

ದಿನದ ಇನ್ನೊಂದು ಪಂದ್ಯದಲ್ಲಿ ಬೆಳಗಾವಿ ನಗರ ತಂಡ ಧಾರವಾಡ ನಗರ ಎದುರು ಒಂದು ವಿಕೆಟ್‌ನ ರೋಚಕ ಜಯ ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ಧಾರವಾಡ ನಗರ 40.2 ಓವರ್‌ ಬೌಲಿಂಗ್ ಮಾಡಿ 112 ರನ್‌ ಕಲೆಹಾಕಿತು. ಎದುರಾಳಿ ಬೆಳಗಾವಿ ತಂಡ 30.5 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಬೆಳಗಾವಿ ತಂಡದ ಕಮೀಲ್‌ ಬೊಂಬಾಯಿವಾಲಾ 27 ರನ್‌ ಗಳಿಸಿ ಉತ್ತಮ ಆರಂಭ ದೊರಕಿಸಿಕೊಟ್ಟಿದ್ದರು. ಕೊನೆಯಲ್ಲಿ ಯಶ್ ಹವಾಲನಾಚೆ (ಅಜೇಯ 10) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಭಾನುವಾರ ನಡೆದ ಪಂದ್ಯದಲ್ಲಿ ಧಾರವಾಡ ನಗರ ತಂಡದ ಎದುರು ಹುಬ್ಬಳ್ಳಿ ನಗರ ತಂಡ ಅರು ವಿಕೆಟ್‌ಗಳ ಜಯ ಸಾಧಿಸಿತು. ಧಾರವಾಡ ತಂಡ ನೀಡಿದ್ದ 176 ರನ್‌ ಗುರಿಯನ್ನು ವಾಣಿಜ್ಯ ನಗರಿಯ ತಂಡ 43.4 ಓವರ್‌ಗಳಲ್ಲಿ ತಲುಪಿತು. ಆರಂಭಿಕ ಬ್ಯಾಟ್ಸ್‌ಮನ್‌ ಮಾಧವ ಧಾರವಾಡಕರ ಅಜೇಯ 92 ರನ್‌ ಗಳಿಸಿದರು. ಶತಕ್ 43 ರನ್‌ ಕಲೆಹಾಕಿ ಗೆಲುವು ಸುಲಭ ಮಾಡಿದರು.

ಇನ್ನೊಂದು ಹೋರಾಟದಲ್ಲಿ ಕಾರವಾರ ನಗರ ತಂಡ 161 ರನ್‌ಗಳ ಸುಲಭ ಜಯ ಸಾಧಿಸಿತು. ಕಾರವಾರ ತಂಡ ನೀಡಿದ್ದ 188 ರನ್‌ ಗುರಿ ಎದುರು ಗದಗ ತಂಡ 29 ರನ್‌ಗೆ ಮುಗ್ಗರಿಸಿತು. ಕೇವಲ ಆರು ಓವರ್‌ಗಳಲ್ಲಿ ತನ್ನ ಹೋರಾಟ ಮುಗಿಸಿತು. ಕಾರವಾರ ತಂಡದ ಅಬ್ದುಲ್‌ ಸಮಿ ನಾಲ್ಕು ಮತ್ತು ಆ್ಯರನ್‌ ನರೋನ ಐದು ವಿಕೆಟ್‌ ಉರುಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.