ADVERTISEMENT

ಬಸ್ ಕೆಳಗೆ ನನ್ನನ್ನು ಎಸೆದಂತಾಗಿತ್ತು: ಮಾಜಿ ಕೋಚ್ ಹೇಳಿಕೆ ನೆನಪಿಸಿಕೊಂಡ ಆಶ್ವಿನ್

ಪಿಟಿಐ
Published 21 ಡಿಸೆಂಬರ್ 2021, 19:30 IST
Last Updated 21 ಡಿಸೆಂಬರ್ 2021, 19:30 IST
ಆರ್. ಅಶ್ವಿನ್
ಆರ್. ಅಶ್ವಿನ್   

ನವದೆಹಲಿ: ಎರಡು ವರ್ಷಗಳ ಹಿಂದೆ ಕ್ರಿಕೆಟ್‌ನಿಂದ ವಿಮುಖರಾಗುವಂತಹ ಕಹಿ ಘಟನೆಗಳು ತಮ್ಮ ವೃತ್ತಿಜೀವನದಲ್ಲಿ ಆಗಿದ್ದವು. ಅದರಲ್ಲೂ ಆಗಿನ ಕೋಚ್ ರವಿಶಾಸ್ತ್ರಿಯವರ ಹೇಳಿಕೆಯೊಂದು ಅಪಾರವಾಗಿ ಘಾಸಿಗೊಳಿಸಿತ್ತು ಎಂದು ಭಾರತ ತಂಡದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಹೇಳಿದ್ದಾರೆ.

‘ಇಎಸ್‌ಪಿಎನ್‌ಕ್ರಿಕ್‌ಇನ್ಫೋ’ಗೆ ನೀಡಿರುವ ಸಂದರ್ಶನದಲ್ಲಿ ಅವರು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

‘2019ರಲ್ಲಿ ಆಸ್ಟ್ರೇಲಿಯಾದಲ್ಲಿ ಕುಲದೀಪ್ ಯಾದವ್ ಐದು ವಿಕೆಟ್ ಗೊಂಚಲು ಗಳಿಸಿದ್ದರು. ಆಗ ಕೋಚ್ ರವಿಶಾಸ್ತ್ರಿಯವರು ವಿದೇಶದಲ್ಲಿ ಅಗ್ರಮಾನ್ಯ ಸ್ಪಿನ್ನರ್‌ ಎಂದರೆ ಕುಲದೀಪ್ ಯಾದವ್ ಮಾತ್ರ ಎಂಬ ಹೇಳಿಕೆ ನೀಡಿದ್ದರು. ಕುಲದೀಪ್ ಐದು ವಿಕೆಟ್ ಗಳಿಸಿದ್ದು ನನಗೂ ಸಂತಸ ತಂದಿತ್ತು. ಏಕೆಂದರೆ ಆಸ್ಟ್ರೇಲಿಯಾದಲ್ಲಿ ಸ್ಪಿನ್ನರ್ ಈ ಸಾಧನೆ ಮಾಡುವುದು ಎಂತಹ ಕಷ್ಟದ ಕೆಲಸ ಎಂಬ ಅರಿವು ನನಗಿದೆ. ಆ ಪಂದ್ಯದಲ್ಲಿ ನಾನು ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದ್ದೆ. ಆದರೆ ಐದು ವಿಕೆಟ್ ಪಡೆದಿರಲಿಲ್ಲ. ರವಿ ಹೇಳಿಕೆಯಿಂದಾಗಿ ನಾನು ಇಳಿದುಹೋಗಿದ್ದೆ. ಬಸ್‌ ಕೆಳಗೆ ನನ್ನನ್ನು ತಳ್ಳಿ, ನಜ್ಜುಗುಜ್ಜು ಮಾಡಿದಂತಾಗಿತ್ತು. ರವಿ ಶಾಸ್ತ್ರಿ ಬಗ್ಗೆ ಎಲ್ಲರಂತೆ ನನಗೂ ಅಪಾರ ಗೌರವವಿದೆ’ ಎಂದಿದ್ದಾರೆ.

ADVERTISEMENT

‘ತಂಡದ ಸಹ ಆಟಗಾರ ಚೆನ್ನಾಗಿ ಆಡಿದಾಗ ಸಂತಸದಲ್ಲಿ ಭಾಗವಹಿಸುವುದು ನಮ್ಮೆಲ್ಲರಿಗೂ ಕಲಿಸಲಾಗಿರುತ್ತದೆ. ಇದು ಕ್ರೀಡಾಸ್ಪೂರ್ತಿಯೂ ಹೌದು. ಕುಲದೀಪ್ ಯಶಸ್ಸನ್ನು ನಾನು ಮನತುಂಬಿ ಅಭಿನಂದಿಸಿದ್ದೆ. ಆದರೆ, ಅವತ್ತು ನಡೆದ ಸಂತೋಷಕೂಟಕ್ಕೆ ಹೋಗಲು ರವಿ ಮಾತು ಕಾಡಿತ್ತು. ನಾನು ಹೋಟೆಲ್ ಕೋಣೆಗೆ ಮರಳಿದೆ. ಪತ್ನಿ, ಮಕ್ಕಳೊಂದಿಗೆ ಮಾತನಾಡಿದೆ. ಮರಳಿ ಸಂತೋಷಕೂಟಕ್ಕೆ ತೆರಳಿದೆ. ಏಕೆಂದರೆ, ನಾವು ಆಸ್ಟ್ರೇಲಿಯಾದಲ್ಲಿ ಸರಣಿ ಜಯಿಸಿದ್ದೆವು. ಅದನ್ನು ಸಂಭ್ರಮಿಸುವ ಅವಕಾಶವನ್ನು ಬಿಡುವುದಾದರೂ ಹೇಗೆ? ಆದ್ದರಿಂದ ತಂಡದೊಂದಿಗೆ ಸೇರಿಕೊಂಡೆ’ ಎಂದು ಅಶ್ವಿನ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.