ಹ್ಯಾಮಿಲ್ಟನ್: ಆತಿಥೇಯ ನ್ಯೂಜಿಲೆಂಡ್ ಹಾಗೂ ಭಾರತ ನಡುವಣ ಎರಡನೇ ಏಕದಿನ ಕ್ರಿಕೆಟ್ ಪಂದ್ಯವು ಮಳೆಯಿಂದಾಗಿ ಫಲಿತಾಂಶವಿಲ್ಲದೆ ರದ್ದಾಗಿದೆ. ಇದರೊಂದಿಗೆ ಕಿವೀಸ್ ನೆಲದಲ್ಲಿಏಕದಿನ ಸರಣಿ ಜಯದ ಕನಸು ಜೀವಂತವಾಗಿ ಉಳಿಸಿಕೊಳ್ಳುವ ಛಲದಲ್ಲಿದ್ದ ಭಾರತ ತಂಡಕ್ಕೆ ನಿರಾಸೆಯಾಗಿದೆ.
ಇಲ್ಲಿನ ಸೆಡಾನ್ ಪಾರ್ಕ್ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು. ಟಾಸ್ ಗೆದ್ದ ನ್ಯೂಜಿಲೆಂಡ್, ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. 4.5 ಓವರ್ಗಳಿದ್ದಾಗ ಮಳೆ ಸುರಿಯಿತು. ಮಳೆ ನಿಂತ ಬಳಿಕ ಪಂದ್ಯವನ್ನು 29 ಓವರ್ಗಳಿಗೆ ಇಳಿಸಿ ಪುನರಾರಂಭಿಸಲಾಯಿತು. ಭಾರತ ತಂಡ 12.5 ಓವರ್ಗಳಲ್ಲಿ 1 ವಿಕೆಟ್ಗೆ 89 ರನ್ ಗಳಿಸಿದ್ದಾಗ ಮತ್ತೆ ಮಳೆ ಸುರಿಯಿತು. 40 ನಿಮಿಷದ ನಂತರ ಪಂದ್ಯವನ್ನು ನಿಲ್ಲಿಸಲಾಯಿತು.
ನಾಯಕ ಶಿಖರ್ ಧವನ್ 3 ರನ್ ಗಳಿಸಿ ಔಟಾದರೆ, ಯುವ ಆಟಗಾರ ಶುಭಮನ್ ಗಿಲ್ ಅಜೇಯ 45 ಹಾಗೂ ಸೂರ್ಯಕುಮಾರ್ ಯಾದವ್ ಅಜೇಯ 34 ರನ್ ಗಳಿಸಿ ಕ್ರೀಸ್ನಲ್ಲಿದ್ದರು.
ಶಿಖರ್ ನಾಯಕತ್ವದ ಭಾರತ ತಂಡ ಮೂರು ಪಂದ್ಯಗಳ ಸರಣಿಯಲ್ಲಿ ಸದ್ಯ 1–0 ಅಂತರದ ಹಿನ್ನಡೆ ಅನುಭವಿಸಿದೆ. ನವೆಂಬರ್ 25ರಂದು ಆಕ್ಲೆಂಡ್ನಲ್ಲಿ ನಡೆದ ಮೊದಲ ಪಂದ್ಯವನ್ನು ಕೇನ್ ವಿಲಿಯಮ್ಸನ್ ಪಡೆ 5 ವಿಕೆಟ್ ಅಂತರದಿಂದ ಜಯಿಸಿದೆ.
ಟೂರ್ನಿಯ ಅಂತಿಮ ಪಂದ್ಯವು ಕ್ರೈಸ್ಟ್ಚರ್ಚ್ನಲ್ಲಿ ನವೆಂಬರ್ 30ರಂದು ನಡೆಯಲಿದೆ. ಆ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಅವಕಾಶ ಟೀಂ ಇಂಡಿಯಾಗೆ ಇದೆ. ಆದರೆ, ಆ ಪಂದ್ಯವನ್ನೂ ಗೆದ್ದು ಸರಣಿಯನ್ನು 2–0 ಅಂತರದಲ್ಲಿ ವಶಪಡಿಸಿಕೊಳ್ಳುವಲೆಕ್ಕಾಚಾರದಲ್ಲಿ ಆತಿಥೇಯ ತಂಡವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.