ADVERTISEMENT

ಒತ್ತಡ ನಿವಾರಣೆಗೆ ಏನು ಮಾಡುತ್ತೀರಿ: ಧೋನಿ ಕೊಟ್ಟ ಸಲಹೆ ನೆನಪಿಸಿಕೊಂಡ ಹಾರ್ದಿಕ್ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜೂನ್ 2022, 8:28 IST
Last Updated 18 ಜೂನ್ 2022, 8:28 IST
ಟೀಮ್ ಇಂಡಿಯಾ ಆಟಗಾರರು (ಸಾಂದರ್ಭಿಕ ಚಿತ್ರ)
ಟೀಮ್ ಇಂಡಿಯಾ ಆಟಗಾರರು (ಸಾಂದರ್ಭಿಕ ಚಿತ್ರ)   

ನವದೆಹಲಿ: ‘ನಾನು ಕೆಲವು ದಿನಗಳ ಹಿಂದೆ ಒತ್ತಡ ನಿವಾರಣೆಗೆ ಏನು ಮಾಡುತ್ತೀರಿ ಎಂದು ಎಂ.ಎಸ್‌.ಧೋನಿ ಅವರನ್ನು ಕೇಳಿದ್ದೆ. ಆಗ ಅವರು ನನ್ನೊಂದಿಗೆ ಸರಳವಾದ ಸಲಹೆಗಳನ್ನು ಹಂಚಿಕೊಂಡಿದ್ದರು’ ಎಂದು ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಹಿರಂಗಪಡಿಸಿದ್ದಾರೆ.

ಶುಕ್ರವಾರ ರಾಜ್‌ಕೋಟ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ನಾಲ್ಕನೇ ಟಿ–20 ಪಂದ್ಯದಲ್ಲಿ ಭಾರತ 82 ರನ್‌ಗಳ ಜಯ ಸಾಧಿಸಿತ್ತು. ಪಂದ್ಯ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಂಡ್ಯ, ಭಾರತ ಕ್ರಿಕೆಟ್‌ ತಂಡ ಮಾಜಿ ನಾಯಕ ಎಂ.ಎಸ್‌.ಧೋನಿ ಅವರೊಂದಿಗಿನ ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

‘ನೀವು ಸ್ಕೋರ್ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ, ನಿಮ್ಮ ತಂಡಕ್ಕೆ ಏನು ಬೇಕು ಎಂದು ಯೋಚಿಸಲು ಪ್ರಾರಂಭಿಸಿ’ ಎಂದು ಧೋನಿ ಹೇಳಿದ್ದರು. ಅವರ ಮಾತುಗಳು ನನ್ನ ಮೇಲೆ ಪ್ರಭಾವ ಬೀರಿವೆ. ಜತೆಗೆ, ನಾನು ಯಾವುದೇ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಆಟವಾಡುವುದನ್ನು ಮೈಗೂಡಿಸಿಕೊಂಡಿದ್ದೇನೆ. ಮಾಹಿ ಭಾಯ್ ಅವರ ಸಲಹೆಗಳು ನನ್ನನ್ನು ಪರಿಪೂರ್ಣ ಆಟಗಾರನಾಗಲು ಸಹಾಯ ಮಾಡಿದೆ. ನನ್ನ ಆಟದ ಬಗ್ಗೆ ಮೌಲ್ಯಮಾಪನ ಮಾಡಿಕೊಳ್ಳುತ್ತೇನೆ. ಅದಕ್ಕೆ ತಕ್ಕಂತೆ ಆಡುತ್ತೇನೆ’ ಎಂದು ಹಾರ್ದಿಕ್ ಹೇಳಿಕೊಂಡಿದ್ದಾರೆ.

ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧ ಮಿಂಚಿನ ಅರ್ಧಶತಕ ಗಳಿಸಿದ ದಿನೇಶ್ ಕಾರ್ತಿಕ್ (27 ಎಸೆತಗಳಲ್ಲಿ 55 ರನ್) ಮತ್ತು ಶಿಸ್ತಿನ ದಾಳಿ ನಡೆಸಿದ ಆವೇಶ್ ಖಾನ್ (18ಕ್ಕೆ 4) ಟೀಮ್ ಇಂಡಿಯಾ ಗೆಲುವಿಗೆ ನೆರವಾದರು.

ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 2–2ರ ಸಮಬಲ ಸಾಧಿಸಿತು. ಅದರಿಂದಾಗಿ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಜಯಿಸುವವರಿಗೆ ಸರಣಿ ಕಿರೀಟ ಒಲಿಯಲಿದೆ.

ಮೊದಲ ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಅಮೋಘ ಜಯ ಸಾಧಿಸಿತ್ತು. ಮೂರನೇ ಪಂದ್ಯದಲ್ಲಿ ರಿಷಭ್ ಪಂತ್ ಬಳಗವು ಪುಟಿದೆದ್ದು ಗೆಲುವು ಸಾಧಿಸಿತ್ತು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.