ರೋಹಿತ್ ಶರ್ಮಾ
ಮುಂಬೈ: ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಅಪಮಾನಕಾರಿ ಸೋಲಿನ ಬಳಿಕ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ನಾಯಕ ರೋಹಿತ್ ಶರ್ಮಾ, ಮುಂಬೈ ರಣಜಿ ತಂಡದ ಜೊತೆಗೆ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಇಂದಿನಿಂದ ಮುಂಬೈನ ಎಂಸಿಎ–ಬಿಕೆಸಿ ಮೈದಾನದಲ್ಲಿ ಮೈದಾನದಲ್ಲಿ ಅಭ್ಯಾಸ ಶಿಬಿರ ಆರಂಭವಾಗಿದೆ.
ಬಾರ್ಡರ್–ಗವಾಸ್ಕರ್ ಟ್ರೋಫಿಯಲ್ಲಿ 3 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ರೋಹಿತ್ ಕೇವಲ 31 ರನ್ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ತಂಡದ ಪ್ರದರ್ಶನದ ಕುರಿತಾದ ಪರಿಶೀಲನಾ ಸಭೆ ನಡೆಯಿತು. ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಬಿಸಿಸಿಐನ ನೂತನ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇದ್ದರು.
‘ರೋಹಿತ್ ಮುಂಬೈ ರಣಜಿ ತಂಡದೊಂದಿಗೆ ತರಬೇತಿ ಪಡೆಯಲು ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಅವರು ಮುಖ್ಯ ಕೋಚ್ ಓಂಕಾರ್ ಸಲವಿ ಅವರನ್ನು ಸಂಪರ್ಕಿಸಿದ್ದಾರೆ ಮತ್ತು ಮುಂದಿನ ರಣಜಿ ಪಂದ್ಯಕ್ಕೆ ಯಾವಾಗ ತರಬೇತಿ ಶಿಬಿರ ನಡೆಯಲಿದೆ ಎಂಬುದರ ಕುರಿತು ಮಾಹಿತಿ ಪಡೆದಿದ್ದಾರೆ’ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ(ಎಂಸಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 23ರಂದು ಮುಂಬೈನ ಎಂಸಿಎ-ಬಿಕೆಸಿ ಮೈದಾನದಲ್ಲಿ ನಡೆಯಲಿರುವ ರಣಜಿ ಪಂದ್ಯದಲ್ಲಿ ಮುಂಬೈ ತಂಡ ಜಮ್ಮು ಮತ್ತು ಕಾಶ್ಮೀರವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ರೋಹಿತ್ ಆಡಲಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ.
2015 ರಲ್ಲಿ ಉತ್ತರ ಪ್ರದೇಶ ವಿರುದ್ಧ ಮುಂಬೈ ಪರ ಕೊನೆಯ ಬಾರಿಗೆ ರೋಹಿತ್ ರಣಜಿ ಪಂದ್ಯದಲ್ಲಿ ಆಡಿದ್ದರು.
ಪಂದ್ಯಕ್ಕೆ ತಮ್ಮ ಲಭ್ಯತೆಯನ್ನು ರೋಹಿತ್ ಇನ್ನೂ ಖಚಿತಪಡಿಸಿಲ್ಲ ಎಂದು ಎಂಸಿಎ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.