ಅನ್ಷುಲ್ ಕಂಬೋಜ್
ಪಿಟಿಐ ಚಿತ್ರ
ಮ್ಯಾಂಚೆಸ್ಟರ್: ಭಾರತ ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ಮಧ್ಯಮ ವೇಗದ ಬೌಲರ್ ಅನ್ಷುಲ್ ಕಂಬೋಜ್ ಅವರು ಸೋಮವಾರ ಓಲ್ಡ್ ಟ್ರಾಫರ್ಡ್ನಲ್ಲಿ ನಡೆದ ಭಾರತ ತಂಡದ ಅಭ್ಯಾಸದ ವೇಳೆ ಗಮನ ಸೆಳೆದರು. ಇದರಿಂದ ಇಂಗ್ಲೆಂಡ್ ವಿರುದ್ಧ ಬುಧವಾರ ಆರಂಭವಾಗುವ ನಾಲ್ಕನೇ ಟೆಸ್ಟ್ಗೆ ಅವರು ಪದಾರ್ಪಣೆ ಮಾಡುವ ಸಾಧ್ಯತೆ ಉಜ್ವಲವಾಗಿದೆ.
ಭಾರತ ತಂಡದ ಪ್ರವಾಸಕ್ಕೆ ಮೊದಲು, ಇಂಗ್ಲೆಂಡ್ ಪ್ರವಾಸ ಮಾಡಿದ್ದ ಭಾರತ ‘ಎ’ ತಂಡದಲ್ಲಿ ಹರಿಯಾಣದ ಬೌಲರ್ ಪ್ರಭಾವಶಾಲಿ ನಿರ್ವಹಣೆ ತೋರಿದ್ದರು. ಭಾನುವಾರ ಅವರನ್ನು ಸೀನಿಯರ್ ತಂಡಕ್ಕೆ ಸೇರ್ಪಡೆ ಮಾಡಲಾಯಿತು.
24 ವರ್ಷ ವಯಸ್ಸಿನ ಕಂಬೋಜ್ ಬೌಲಿಂಗ್ ಮಾಡುವುದನ್ನು ತಂಡದ ಹೆಡ್ ಕೋಚ್ ಗೌತಮ್ ಗಂಭೀರ್, ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರಕರ್ ಲಕ್ಷ್ಯವಿಟ್ಟು ಗಮನಿಸಿದರು. ಭಾರತದ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬೌಲರ್ಗಳನ್ನು ತಮ್ಮ ವೇಗ ಮತ್ತು ಸ್ವಿಂಗ್ನಿಂದ ಪದೇ ಪದೇ ಪರೀಕ್ಷೆಗೆ ಒಳಪಡಿಸುವ ಮೂಲಕ ಕಂಬೋಜ್ ತಮ್ಮ ಪ್ರತಿಭೆಯ ಸುಳುಹುಗಳನ್ನು ನೀಡಿದರು. ಅವರ ಕೆಲವು ಎಸೆತಗಳು ಬ್ಯಾಟನ್ನು ವಂಚಿಸಿದ್ದು, ಮಾರ್ಕೆಲ್ ಅವರ ಕುತೂಹಲ ಕೆರಳಿಸಿತು.
ತೊಡೆಯ ನೋವಿನಿಂದ ಆಕಾಶ್ ದೀಪ್ ಮತ್ತು ಗಾಯಾಳು ಅರ್ಷದೀಪ್ ನೆಟ್ಸ್ನಲ್ಲಿ ಇರಲಿಲ್ಲ. ಉಳಿದ ಬೌಲರ್ಗಳು ಸರದಿಯಂತೆ ಬೌಲಿಂಗ್ ಮಾಡಿದರು. ಲಾಹ್ಲಿಯಲ್ಲಿ (ಹರಿಯಾಣ) ಕಳೆದ ವರ್ಷ ಕೇರಳ ವಿರುದ್ಧ ರಣಜಿ ಟ್ರೋಫಿ ಪಂದ್ಯದ ಇನಿಂಗ್ಸ್ ಒಂದರಲ್ಲಿ ಎಲ್ಲ ವಿಕೆಟ್ಗಳನ್ನು (49ಕ್ಕೆ10) ಕಬಳಿಸಿ ಸುದ್ದಿ ಮಾಡಿದ್ದ ಕಂಬೋಜ್ ಅವರಿಗೇ ತಂಡ ಹೆಚ್ಚು ಒತ್ತು ಕೊಟ್ಟಂತೆ ಕಾಣಿಸಿತು. ಬೌಲಿಂಗ್ ನಂತರ ಪ್ಯಾಡ್ ಕಟ್ಟಿ ಕೆಲಕಾಲ ಬ್ಯಾಟಿಂಗ್ ನಡೆಸಿದರು. ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಅವರಿಗೆ ಈ ಅವಕಾಶ ಸಿಗಲಿಲ್ಲ. ಮೊಹಮ್ಮದ್ ಸಿರಾಜ್ ಬ್ಯಾಟಿಂಗ್ನಿಂದ ವಿನಾಯಿತಿ ಕೇಳಿದ್ದರು.
ತಾಲೀಮು ನಡೆಸಲು ಇನ್ನೊಂದು ದಿನ ಉಳಿದಿದ್ದರೂ, ಕಂಬೋಜ್ ಅವರು ಜಸ್ಪ್ರೀತ್ ಬೂಮ್ರಾ ಮತ್ತು ಸಿರಾಜ್ ಜೊತೆ ನಾಲ್ಕನೇ ಟೆಸ್ಟ್ನಲ್ಲಿ ದಾಳಿಗಿಳಿಯಬಹುದು ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಆಕಾಶ್ ದೀಪ್ ಫಿಟ್ನೆಸ್ ಟೆಸ್ಟ್ನಲ್ಲಿ ತೇರ್ಗಡೆಯಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದರಿಂದ ಪ್ರಸಿದ್ಧ ಕೃಷ್ಣ ಅವರಿಗೆ ಅನ್ಯಾಯವಾದ ಭಾವನೆ ಮೂಡಲೂಬಹುದು.
ಎರಡನೇ ಟೆಸ್ಟ್ನಲ್ಲಿ ನೀಡಿದ ಉತ್ತಮ ಪ್ರದರ್ಶನದ ಪರಿಣಾಮ ಆಕಾಶ್ ದೀಪ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದರು. ಬೂಮ್ರಾ ತಂಡಕ್ಕೆ ಮರಳಿದಾಗ ಪ್ರಸಿದ್ಧ ಅವರನ್ನು ಕೈಬಿಡಲಾಯಿತು. ಹೆಡಿಂಗ್ಲೆ ಮತ್ತು ಎಜ್ಬಾಸ್ಟನ್ನಲ್ಲಿ ಪ್ರಸಿದ್ಧ ಅತಿಯಾಗಿ ಶಾರ್ಟ್ ಎಸೆತಗಳನ್ನು ಹೆಚ್ಚಾಗಿ ಪ್ರಯೋಗಿಸಿದ್ದರಿಂದ ಟೀಕೆಗೆ ಒಳಗಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.