ADVERTISEMENT

2016ರ ಸೆಮಿಫೈನಲ್ ಸೋಲು: ವಿಂಡೀಸ್ ವಿರುದ್ಧ ಸೇಡು ತೀರಿಸಿಕೊಳ್ತಾರಾ ಆ ಇಬ್ಬರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮಾರ್ಚ್ 2026, 12:57 IST
Last Updated 1 ಮಾರ್ಚ್ 2026, 12:57 IST
<div class="paragraphs"><p>ಭಾರತ ತಂಡದ ಆಟಗಾರರು</p></div>

ಭಾರತ ತಂಡದ ಆಟಗಾರರು

   

ಕೋಲ್ಕತ್ತ: ಇಲ್ಲಿನ ಈಡನ್ ಗಾರ್ಡನ್ಸ್ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ಇಂದು (ಭಾನುವಾರ) ನಿರ್ಣಾಯಕ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ಸೆಮಿಫೈನಲ್ ಪ್ರವೇಶ ಪಡೆಯಲಿದೆ. ಸೋತ ತಂಡ ಟೂರ್ನಿಯಿಂದಲೇ ನಿರ್ಗಮಿಸಲಿದೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು 2016ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಅಂದಿನ ಪಂದ್ಯವನ್ನು ವೆಸ್ಟ್ ಇಂಡೀಸ್ ತಂಡ ರೋಚಕವಾಗಿ ಗೆಲ್ಲುವ ಮೂಲಕ ಭಾರತದ ಪ್ರಶಸ್ತಿ ಸುತ್ತಿಗೆ ತಲುಪುವ ಆಸೆಗೆ ತಣ್ಣೀರು ಎರಚಿತ್ತು.

ADVERTISEMENT

ಸದ್ಯ, 2016ರಿಂದ ಇಲ್ಲಿಗೆ ಬರೋಬ್ಬರಿ 10 ವರ್ಷಗಳು ಪೂರ್ಣಗೊಂಡಿವೆ. ಭಾರತ ಹಾಗೂ ವೆಸ್ಟ್ ಇಂಡೀಸ್ ಎರಡೂ ತಂಡದಲ್ಲಿ ಅನೇಕ ಬದಲಾವಣೆಗಳಾಗಿವೆ. ಅಂದು ತಂಡದ ನಾಯಕರಾಗಿದ್ದ ಡ್ಯಾರೆನ್ ಸ್ಯಾಮಿ ಇಂದು ವಿಂಡೀಸ್ ತಂಡದ ಕೋಚ್ ಆಗಿದ್ದಾರೆ. ಅಂದು ಭಾರತ ತಂಡದ ನಾಯಕರಾಗಿದ್ದ ಎಂ.ಎಸ್. ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ.

ಆದರೆ, ಪ್ರಸ್ತುತ ಭಾರತ ತಂಡದಲ್ಲಿ ಇರುವ ಈ ಇಬ್ಬರು ಆಟಗಾರರು ಮಾತ್ರ 2016ರಲ್ಲೂ ತಂಡದ ಭಾಗವಾಗಿದ್ದರು. ಇಂದೂ ಅವರೇ ತಂಡದ ಆಧಾರ ಸ್ತಂಭವಾಗಿದ್ದಾರೆ. ಆ ಇಬ್ಬರು ಬೇರೆ ಯಾರೂ ಅಲ್ಲ, ಭಾರತ ತಂಡದ ತಾರಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ವೇಗಿ ಜಸ್‌ಪ್ರೀತ್ ಬುಮ್ರಾ.

2016ರ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ವಿರಾಟ್ ಕೊಹ್ಲಿ ಅವರ ಅಜೇಯ 89 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 192 ರನ್ ಕಲೆಹಾಕಿತ್ತು. ಈ ಬೃಹತ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡವು 19.4 ಓವರ್‌ಗಳಲ್ಲಿ ಗುರಿ ತಲುಪಿತ್ತು. ಪಂದ್ಯದಲ್ಲಿ ಲೆಂಡಲ್ ಸಿಮನ್ಸ್ ಅಜೇಯ 82 ರನ್ ಗಳಿಸಿ ಗೆಲುವಿಗೆ ಕಾರಣರಾಗಿದ್ದರು.

ಅಂದಿನ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ಜಸ್‌ಪ್ರೀತ್ ಬುಮ್ರಾ 42 ರನ್ ನೀಡಿ 1 ವಿಕೆಟ್ ಪಡೆದುಕೊಂಡಿದ್ದರು. ಹಾರ್ದಿಕ್ ಪಾಂಡ್ಯ ಕೂಡ 4 ಓವರ್‌ ಬೌಲಿಂಗ್ ಮಾಡಿ 43 ರನ್ ಬಿಟ್ಟುಕೊಟ್ಟಿದ್ದರು. ಒಟ್ಟಾರೆಯಾಗಿ ಈ 10 ವರ್ಷಗಳಲ್ಲಿ ಕ್ರಿಕೆಟ್‌ನಲ್ಲಿ ಅನೇಕ ಬದಲಾವಣೆಗಳು ಆಗಿದ್ದರೂ ಕೂಡ ಭಾರತ ತಂಡದ ಈ ಇಬ್ಬರು ಆಟಗಾರರು ಅಂದಿನಿಂದ ಇಂದಿನವರೆಗೂ ಭಾರತ ತಂಡದ ಪ್ರಮುಖ ಆಟಗಾರರಾಗಿ ಉಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.