ಕೋಲ್ಕತ್ತ: ಭಾರತ ಕ್ರಿಕೆಟ್ ತಂಡವು ಇದೇ ತಿಂಗಳು ನಡೆಯಲಿರುವ ಸರಣಿಯಲ್ಲಿ ಆಡಲು ದಕ್ಷಿಣ ಆಫ್ರಿಕಾಕ್ಕೆ ತೆರಳುವುದು ಖಚಿತವಾಗಿದೆ.
ಶನಿವಾರ ನಡೆದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾರ್ಷಿಕ ಮಹಾಸಭೆಯಲ್ಲಿ ಈ ಕುರಿತು ನಡೆದ ಚರ್ಚೆಯಲ್ಲಿ ಭಾರತ ತಂಡದ ಪ್ರವಾಸಕ್ಕೆ ಹಸಿರು ನಿಶಾನೆ ನೀಡಲಾಯಿತು. ಆದರೆ, ಪ್ರವಾಸವು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಸರಣಿಗಳು ಮಾತ್ರ ನಡೆಯಲಿವೆ. ಟಿ20 ಸರಣಿಯನ್ನು ಮುಂದೂಡಲಾಗಿದೆ.
‘ದಕ್ಷಿಣ ಆಫ್ರಿಕಾದಲ್ಲಿ ಓಮೈಕ್ರಾನ್ ಪ್ರಕರಣಗಳು ಹೆಚ್ಚಿವೆ. ಆದ್ದರಿಂದ ಕ್ರಿಕೆಟ್ ಸರಣಿ ಮುಂದೂಡುವ ಸಾಧ್ಯತೆ ಇತ್ತು. ಆದರೆ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಭಾರತ ತಂಡಕ್ಕೆ ತೆರಳಲು ಅನುಮತಿ ನೀಡಲು ನಿರ್ಧರಿಸಲಾಗಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದರು.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿರುವ ಭಾರತ ತಂಡದಲ್ಲಿ 20 ಆಟಗಾರರನ್ನು ಆಯ್ಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಎನ್ಸಿಎಗೆ ಲಕ್ಷಣ್ 13ರಂದು
ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಇದೇ 13ರಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೌಲಿಂಗ್ ಕೋಚ್ ಟ್ರಾಯ್ ಕೂಲಿ ಕೂಡ ಕಾರ್ಯಾರಂಭ ಮಾಡಲಿದ್ದಾರೆ.
ಸಭೆಯ ನಿರ್ಣಯಗಳು
* ಪಂದ್ಯದ ಅಧಿಕಾರಿಗಳು, ನೆರವು ಸಿಬ್ಬಂದಿಯ ನಿವೃತ್ತಿ ವಯೋಮಿತಿಯನ್ನು 65 ವರ್ಷಕ್ಕೆ ಹೆಚ್ಚಿಸುವುದು
* ಈಶಾನ್ಯ ರಾಜ್ಯಗಳು, ಬಿಹಾರ, ಪುದುಚರಿ ಮತ್ತು ಉತ್ತರಾಖಂಡ ರಾಜ್ಯ ಸಂಸ್ಥೆಗಳಿಗೆ ಒಳಾಂಗಣ ಸೌಲಭ್ಯಗಳ ಅಭಿವೃದ್ಧಿಗಾಗಿ ₹ 10 ಕೋಟಿ.
* ಬ್ರಿಜೇಶ್ ಪಟೇಲ್ ಮತ್ತು ಎಂಕೆಜೆ ಮಜುಮದಾರ್ ಅವರನ್ನು ಐಪಿಎಲ್ ಆಡಳಿತ ಸಮಿತಿಗೆ ನೇಮಕ ಮಾಡಲಾಗಿದೆ. ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರನ್ನು ಭಾರತ ಕ್ರಿಕೆಟಿಗರ ಸಂಘದ ಪ್ರತಿನಿಧಿಯನ್ನಾಗಿ ನೇಮಕ ಮಾಡಲಾಗಿದೆ
* ಪ್ರವಾಸ, ವೇಳಾಪಟ್ಟಿ ಮತ್ತು ತಾಂತ್ರಿಕ ಸಮಿತಿ, ಅಂಪೈರ್ ಕಮಿಟಿ ಮತ್ತು ಅಂಗವಿಕಲರ ಕ್ರಿಕೆಟ್ ಸಮಿತಿ ಪ್ರಕಟಣೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.