ವೈಭವ್ ಸೂರ್ಯವಂಶಿ, ಆಯುಷ್ ಮ್ಹಾತ್ರೆ
ನವದೆಹಲಿ (ಪಿಟಿಐ): ಮುಂಬೈನ ಬ್ಯಾಟರ್ ಆಯುಷ್ ಮ್ಹಾತ್ರೆ ಅವರನ್ನು, ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಭಾರತ 19 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಐಪಿಎಲ್ನಲ್ಲಿ ಸಂಚಲನ ಮೂಡಿಸಿದ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಸಹ ಈ ತಂಡದಲ್ಲಿದ್ದಾರೆ.
ಜೂನ್ 24ರಂದು ಅಭ್ಯಾಸ ಪಂದ್ಯದೊಡನೆ ಭಾರತ ತಂಡದ ಪ್ರವಾಸ ಆರಂಭವಾಗಲಿದೆ. ಇದರ ನಂತರ ಐದು ಪಂದ್ಯಗಳ ಯುವ ಏಕದಿನ ಸರಣಿ ಮತ್ತು ಎರಡು ಅಭ್ಯಾಸ ಪಂದ್ಯಗಳನ್ನು ಭಾರತ ಆಡಲಿದೆ. ರಾಜಸ್ಥಾನ ರಾಯಲ್ಸ್ ಪರ ಗಮನ ಸೆಳೆಯುವ ಪ್ರದರ್ಶನ ನೀಡಿದ್ಕಕ್ಕಾಗಿ ಬಿಹಾರದ ಬ್ಯಾಟರ್ ಆಯ್ಕೆ ಆಗಿದ್ದಾರೆ. ಪ್ರಬಲ ಗುಜರಾತ್ ಟೈಟನ್ಸ್ ವಿರುದ್ಧ 35 ಎಸೆತಗಳಲ್ಲಿ ಶತಕ ಬಾರಿಸಿ ಪರಾಕ್ರಮ ಮೆರೆದಿದ್ದರು. ಇದು ಲೀಗ್ನ ಎರಡನೇ ಅತಿ ವೇಗದ ಶತಕವಾಗಿತ್ತು.
17 ವರ್ಷ ವಯಸ್ಸಿನ ಮ್ಹಾತ್ರೆ ಅವರು 9 ಪ್ರಥಮ ದರ್ಜೆ ಪಂದ್ಯ ಮತ್ತು ಏಳು ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದು 962 ರನ್ ಕಲೆಹಾಕಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕವಾಡ್ ಗಾಯಾಳಾಗಿದ್ದ ಕಾರಣ ಅವರ ಸ್ಥಾನಕ್ಕೆ ಆಯುಷ್ ಆಯ್ಕೆ ಆಗಿದ್ದರು.
ಮುಂಬೈನ ವಿಕೆಟ್ ಕೀಪರ್ ಅಭಿಗ್ಯಾನ್ ಕುಂಡು ತಂಡದ ಉಪನಾಯಕರಾಗಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ 19 ವರ್ಷದೊಳಗಿನವರ ತಂಡದಲ್ಲಿ ಮಿಂಚಿದ ಕೇರಳದ ಲೆಗ್ ಸ್ಪಿನ್ನರ್ ಮೊಹಮ್ಮದ್ ಇನಾನ್ ಅವರಿಗೂ 16 ಸದಸ್ಯರ ತಂಡದಲ್ಲಿ ಮಣೆಹಾಕಲಾಗಿದೆ.
ತಂಡ: ಆಯುಷ್ ಮ್ಹಾತ್ರೆ (ನಾಯಕ), ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ, ಮೌಲ್ಯರಾಜಸಿನ್ಹ ಚಾವ್ಡಾ, ರಾಹುಲ್ ಕುಮಾರ್, ಅಭಿಗ್ಯಾನ್ ಕುಂಡು (ಉಪನಾಯಕ–ವಿಕೆಟ್ ಕೀಪರ್), ಆರ್.ಎಸ್.ಅಂಬರೀಶ್, ಕನಿಷ್ಕ್ ಚೌಹಾನ್, ಖಿಲಾನ್ ಪಟೇಲ್, ಹೆನಿಲ್ ಪಟೇಲ್, ಯುದ್ಧಜಿತ್ ಗುಹಾ, ಪ್ರಣವ್ ರಾಘವೇಂದ್ರ, ಆದಿತ್ಯ ರಾಣಾ, ಅನ್ಮೋಲ್ಜೀತ್ ಸಿಂಗ್.
ಮೀಸಲು ಆಟಗಾರರು: ನಮನ್ ಪುಷ್ಕಕ್, ಡಿ. ದಿಪೇಶ್, ವೆದಾಂತ್ ತ್ರಿವೇದಿ, ವಿಕಲ್ಪ್ ತಿವಾರಿ, ಅಲಂಕೃತ್ ರಾಪೊಲ್.
ವೇಳಾಪಟ್ಟಿ ಇಂತಿದೆ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.