ಸಿಡ್ನಿ: ಭಾನುವಾರ ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಎರಡನೇ ಟ್ವೆಂಟಿ-20 ಅಂತರ ರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ಭಾರತ ತಂಡದಲ್ಲಿ ಪ್ರಮುಖವಾಗಿ ಮೂರು ಬದಲಾವಣೆಗಳನ್ನು ತರಲಾಗಿದೆ. ಗಾಯದಿಂದಾಗಿ ವಿಶ್ರಾಂತಿಯಲ್ಲಿರುವ ರವೀಂದ್ರ ಜಡೇಜಾ ಸ್ಥಾನದಲ್ಲಿ ಯಜುವೇಂದ್ರ ಚಹಲ್ ಕಾಣಿಸಿಕೊಂಡಿದ್ದಾರೆ. ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ ವಿಶ್ರಾಂತಿ ಒದಗಿಸಲಾಗಿದ್ದು, ಇವರ ಸ್ಥಾನವನ್ನು ಶಾರ್ದೂಲ್ ಠಾಕೂರ್ ಪಡೆದಿದ್ದಾರೆ. ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ.
ಕ್ಯಾನ್ಬೆರಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 11 ರನ್ ಅಂತರದ ಗೆಲುವು ದಾಖಲಿಸಿತ್ತು. ಕಂಕಷನ್ ಬದಲಿ ಆಟಗಾರನ ರೂಪದಲ್ಲಿ ಕಣಕ್ಕಿಳಿದಿದ್ದ ಯಜುವೇಂದ್ರ ಚಹಲ್ ಟೀಮ್ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಅತ್ತ ಹೆಲ್ಮೆಟ್ಗೆ ಚೆಂಡು ಅಪ್ಪಳಿಸಿದ ಪರಿಣಾಮ ಗಾಯಕ್ಕೆ ತುತ್ತಾಗಿರುವ ರವೀಂದ್ರ ಜಡೇಜ ಸೇವೆಯಿಂದ ಟೀಮ್ ಇಂಡಿಯಾ ವಂಚಿತವಾಗಿದೆ.
ಫಿಂಚ್, ಸ್ಟಾರ್ಕ್ ಅನುಪಸ್ಥಿತಿ; ವೇಡ್ ನಾಯಕ
ಅತ್ತ ಆಸ್ಟ್ರೇಲಿಯಾ ತಂಡದಲ್ಲಿ ಗಾಯದ ಸಮಸ್ಯೆ ಎದುರಿಸುತ್ತಿರುವ ಆ್ಯರನ್ ಫಿಂಚ್ ಅನುಪಸ್ಥಿತಿ ಎದ್ದು ಕಾಣಿಸುತ್ತಿದೆ. ಈ ಹಿನ್ನೆಲೆಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮ್ಯಾಥ್ಯೂ ವೇಡ್ ತಂಡವನ್ನು ಮುನ್ನಡೆಸಲಿದ್ದಾರೆ.
ಅದೇ ರೀತಿ ವೈಯಕ್ತಿಕ ಕಾರಣಗಳಿಂದಾಗಿ ಮಿಚೆಲ್ ಸ್ಟಾರ್ಕ್ ಸೇವೆಯಿಂದಲೂ ಆಸೀಸ್ ವಂಚಿತವಾಗಿದೆ. ಜೋಶ್ ಹ್ಯಾಜಲ್ವುಡ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇವರೆಲ್ಲರ ಸ್ಥಾನಗಳಿಗೆ ಡ್ಯಾನಿಯಲ್ ಸ್ಯಾಮ್ಸ್, ಮಾರ್ಕಸ್ ಸ್ಟೋಯಿನಿಸ್ ಹಾಗೂ ಆಂಡ್ರ್ಯೂ ಟೈ ಅವರನ್ನು ಆಯ್ಕೆ ಮಾಡಲಾಗಿದೆ.
ಆಡುವ ಬಳಗ ಇಂತಿದೆ:
ಭಾರತ: ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಟಿ ನಟರಾಜನ್, ಯಜುವೇಂದ್ರ ಚಹಲ್
ಆಸ್ಟ್ರೇಲಿಯಾ: ಡಾರ್ಸಿ ಶಾರ್ಟ್, ಮಾರ್ಕಸ್ ಸ್ಟೋಯಿನಿಸ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಮೊಯಿಸೆಸ್ ಹೆನ್ರಿಕ್ಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್, ನಾಯಕ), ಡ್ಯಾನಿಯಲ್ ಸ್ಯಾಮ್ಸ್, ಸೀನ್ ಅಬಾಟ್, ಮಿಚೆಲ್ ಸ್ವೆಪ್ಸನ್, ಆ್ಯಡಂ ಜಂಪಾ ಮತ್ತು ಆಂಡ್ರ್ಯೂ ಟೈ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.