ADVERTISEMENT

ಭಾರತದ ಅಭಿಮಾನಿಗೆ ಜನಾಂಗೀಯ ನಿಂದನೆ

ಪಿಟಿಐ
Published 16 ಜನವರಿ 2021, 15:27 IST
Last Updated 16 ಜನವರಿ 2021, 15:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಡ್ನಿ: ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೂರನೇ ಟೆಸ್ಟ್ ನಡೆದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ತಮ್ಮ ವಿರುದ್ಧ ಜನಾಂಗೀಯ ನಿಂದನೆ ಮಾಡಲಾಗಿತ್ತು ಎಂದು ಭಾರತದ ಅಭಿಮಾನಿಯೊಬ್ಬರು ದೂರು ನೀಡಿದ್ದಾರೆ.

ಸಿಡ್ನಿಯ ನಿವಾಸಿಯಾಗಿರುವ ಕೃಷ್ಣಕುಮಾರ್ ಗುರುವಾರ ವೀನಸ್ ಎನ್‌ಎಎಸ್‌ಡಬ್ಲ್ಯೂ ಕಾನೂನು ಅಧಿಕಾರಿಗಳನ್ನು ಭೇಟಿಯಾಗಿ ದೂರು ದಾಖಲಿಸಿದ್ದಾರೆ.

’ಪಂದ್ಯ ನೋಡಲು ಕ್ರೀಡಾಂಗಣ ಪ್ರವೇಶಿಸುವಾಗ ಭದ್ರತಾ ಸಿಬ್ಬಂದಿಯೊಬ್ಬರು ನನ್ನನ್ನು ತಡೆದರು. ನನ್ನ ಕೈಯಲ್ಲಿದ್ದ ಬ್ಯಾನರ್‌ವೊಂದನ್ನು ತೆಗೆದುಕೊಂಡು ಹೋಗಲು ಬಿಡಲಿಲ್ಲ. ನಿಗದಿತ ಅಳತೆಗಿಂತ ದೊಡ್ಡದಿದೆ ಎಂದು ಹೇಳಿದರು. ಅದಕ್ಕೆ ನಾನು ಭದ್ರತಾ ಮೇಲ್ವಿಚಾರಕರೊಂದಿಗೆ ಮಾತನಾಡುತ್ತೇನೆ. ಅವಕಾಶ ಕೊಡುವಂತೆ ವಿನಂತಿಸಿದೆ. ಆಗ ಆ ವ್ಯಕ್ತಿಯು ಈ ವಿಷಯ ಬಗೆಹರಿಯಬೇಕಾದರೆ, ನೀನು ಬಂದಿರುವ ಜಾಗಕ್ಕೆ ಹೋಗು ಎಂದು ವ್ಯಂಗ್ಯ ಮಾಡಿದ್ದೂ ಅಲ್ಲದೇ ತನ್ನ ಸಹೋದ್ಯೋಗಿಗಳ ಬಳಿ ನನ್ನ ಬಗ್ಗೆ ಆಕ್ಷೇಪಾರ್ಹ ಪದಗಳನ್ನು ಬಳಸಿ ಮಾತನಾಡಿದ‘ ಎಂದು ಕೃಷ್ಣಕುಮಾರ್ ದೂರು ನೀಡಿದ್ದಾರೆ.

ADVERTISEMENT

’ನನ್ನ ಮಕ್ಕಳು ಬಳಸುವ ಪೇಪರ್ ರೋಲ್‌ನಿಂದ ತಯಾರಿಸಿದ ಚಿಕ್ಕ ಬ್ಯಾನರ್ ಅದಾಗಿತ್ತು. ಕೊನೆಗೆ ನನ್ನ ಕಾರಿನಲ್ಲಿ ಬ್ಯಾಗ್ ಇಟ್ಟು ಬಂದೆ. ಮರಳಿದ ನಂತರವೂ ಆ ಭದ್ರತಾ ಸಿಬ್ಬಂದಿಯು ಬಹಳಷ್ಟು ತಪಾಸಣೆ ಮಾಡಿ ಸಂಶಯದ ಬಿರುನುಡಿಗಳನ್ನು ಆಡಿದರು. ನನಗೆ ಅವಮಾನವಾಗಿದೆ. ನನಗೆ ನ್ಯಾಯಬೇಕು‘ ಎಂದು ಕೃಷ್ಣಕುಮಾರ್ ಆಗ್ರಹಿಸಿದ್ದಾರೆ.

’ವಿಷಯದ ವಿವರಗಳನ್ನು ತೆಗೆದುಕೊಂಡಿದ್ದೇವೆ. ದೂರು ದಾಖಲಿಸಲಾಗಿದೆ. ಈ ಕುರಿತು ತನಿಖೆ ಆರಂಭಿಸಿದ್ದೇವೆ‘ ಎಂದು ವೀನಸ್ ಎನ್‌ಎಸ್‌ಡಬ್ಲ್ಯು ವಕ್ತಾರರು ತಿಳಿಸಿದ್ದಾರೆ.

ಸಿಡ್ನಿಯಲ್ಲಿ ಪ್ರೇಕ್ಷಕರ ಗುಂಪೊಂದು ಭಾರತ ತಂಡದ ಆಟಗಾರ ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ವಿರುದ್ಧ ಜನಾಂಗೀಯ ನಿಂದನೆ ಮಾಡಿತ್ತು. ಬಿಸಿಸಿಐ ಪಂದ್ಯ ರೆಫರಿಗೆ ದೂರು ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.