ಕೋಲ್ಕತ್ತ: ಇಂಡಿಯನ್ ಪ್ರೀಮಿಯರ್ ಲೀಗ್ನ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕರಾಗಿ ಭಾರತ ಕ್ರಿಕೆಟ್ ತಂಡದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ನೇಮಕ ಮಾಡಲಾಗಿದೆ. ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಶ್ರೇಯಸ್ ಅವರನ್ನು ₹ 12.25 ಕೋಟಿಯ ಭಾರೀ ಮೊತ್ತಕ್ಕೆ ಕೋಲ್ಕತ್ತ ತಂಡ ಖರೀದಿಸಿತ್ತು.
2020ರ ಆವೃತ್ತಿಯಲ್ಲಿ ಶ್ರೇಯಸ್ ದೆಹಲಿ ತಂಡವನ್ನು ಮುನ್ನಡೆಸಿದ್ದರು. 2021ರಲ್ಲಿ ಅವರು ಗಾಯಗೊಂಡಿದ್ದರಿಂದ ರಿಷಭ್ ಪಂತ್ಗೆ ನಾಯಕತ್ವದ ಹೊಣೆ ನೀಡಲಾಗಿತ್ತು.
ಇಯಾನ್ ಮಾರ್ಗನ್ ಅವರ ಬದಲಾವಣೆಗೆ ಮುಂದಾಗಿದ್ದ ಕೆಕೆಆರ್, ಶ್ರೇಯಸ್ಗೆ ನಾಯಕನ ಹೊಣೆ ನಿಡಿದೆ.
‘ಉತ್ತಮ ಬ್ಯಾಟಿಂಗ್ ಕೌಶಲ್ಯದ ಮೂಲಕ ಅವರು(ಶ್ರೇಯಸ್ ಅಯ್ಯರ್) ಮೆಚ್ಚುಗೆ ಗಳಿಸಿದ್ದಾರೆ. ಕೆಕೆಆರ್ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ವಿಶ್ವಾಸವಿದೆ’ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ತತಿಕ್ರಿಯಿಸಿರುವ ಶ್ರೇಯಸ್ ಅಯ್ಯರ್, ಕೆಕೆಆರ್ನಂತಹ ಪ್ರತಿಷ್ಠಿತ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದು ಅತ್ಯಂತ ಗೌರವದ ವಿಷಯ ಎಂದು ಭಾವಿಸುತ್ತೇನೆ. ಐಪಿಎಲ್, ಬೇರೆ ಬೇರೆ ದೇಶಗಳು ಮತ್ತು ವಿಭಿನ್ನ ಸಂಸ್ಕೃತಿ ಇರುವ ಅತ್ಯುತ್ತಮ ಆಟಗಾರರನ್ನು ಕರೆತರುತ್ತದೆ. ಅತ್ಯಂತ ಪ್ರತಿಭಾನ್ವಿತ ಆಟಗಾರರಿರುವ ಕೆಕೆಆರ್ ತಂಡವನ್ನು ಮುನ್ನಡೆಸಲು ಕಾತರನಾಗಿದ್ದೇನೆ’ ಎಂದು ಹೇಳಿದ್ದಾರೆ.
‘ಈ ತಂಡವನ್ನು ಮುನ್ನಡೆಸಲು ಅವಕಾಶ ನೀಡಿದ ಕೆಕೆಆರ್ ಮಾಲೀಕರು, ಆಡಳಿತ ಮಂಡಳಿ ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ. ತಂಡದ ಗುರಿ ಸಾಧನೆಗೆ ತಕ್ಕ ಪ್ರದರ್ಶನವನ್ನು ನೀಡುವ ವಿಶ್ವಾಸವಿದೆ’ಎಂದು ಅವರು ಹೇಳಿದ್ಧಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.