ADVERTISEMENT

ಭಾರತವು ಅದ್ಭುತವಾದ ದೇಶ, ಭಾರತೀಯರಿಗೆ ಯುದ್ಧ ಬೇಕಾಗಿಲ್ಲ: ಶೋಯಬ್ ಅಖ್ತರ್

ಏಜೆನ್ಸೀಸ್
Published 16 ಮಾರ್ಚ್ 2020, 13:00 IST
Last Updated 16 ಮಾರ್ಚ್ 2020, 13:00 IST
   

ಲಾಹೋರ್: ಭಾರತವು ಅದ್ಭುತವಾದ ದೇಶವಾಗಿದ್ದು, ಆತಿಥ್ಯದ ಗುಣ ಹೊಂದಿರುವಭಾರತೀಯರು ಪಾಕಿಸ್ತಾನ ಜೊತೆಗಿನ ವೈರತ್ವವನ್ನು ಇಷ್ಟಪಡಲಾರರು ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಖ್ತರ್‌, ‘ಭಾರತವು ಶ್ರೇಷ್ಠ ತಾಣವಾಗಿದೆ. ಅಲ್ಲಿ ಅದ್ಭುತವಾದ ಜನರಿದ್ದಾರೆ. ಅವರು ಪಾಕಿಸ್ತಾನದೊಂದಿಗೆ ವೈರತ್ವ ಸಾಧಿಸುತ್ತಿದ್ದಾರೆಂದು ಅಥವಾ ಯಾವುದೇ ತರಹದ ಯುದ್ಧವನ್ನು ಬಯಸುತ್ತಾರೆ ಎಂದು ನಾನು ಭಾವಿಸಿಯೇ ಇಲ್ಲ’ ಎಂದು ಹೇಳಿದ್ದಾರೆ.

ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವೀಕ್ಷಕ ವಿವರಣೆಗಾರನಾಗಿಯೂ ಕಾಣಿಸಿಕೊಂಡಿದ್ದ ಅಖ್ತರ್‌, ನಾನು ಟಿವಿ ಕಾರ್ಯಕ್ರಮಗಳು ಮತ್ತು ಇತರೆ ಉದ್ದೇಶಗಳ ಸಲುವಾಗಿ ಭಾರತಕ್ಕೆ ತೆರಳಿದ್ದೇನೆ. ಒಂದು ವೇಳೆ ಯುದ್ಧ ಆರಂಭವಾದರೇ? ಎಂದೆಲ್ಲ ಭಾವಿಸಿದ್ದೆ. ಭಾರತದ ಉದ್ದಗಲಕ್ಕೂ ಸಂಚರಿಸಿ, ಆ ದೇಶವನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಹಾಗಾಗಿ, ಭಾರತವು ಪಾಕಿಸ್ತಾನದೊಂದಿಗೆ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿದೆ ಎಂದು ನಾನು ಈ ದಿನ ವಿಶ್ವಾಸದಿಂದ ಹೇಳಬಲ್ಲೆ. ಭಾರತದ ಪ್ರಗತಿಯ ಹಾದಿಯು ಪಾಕಿಸ್ತಾನದ ಮೂಲಕವೇ ಸಾಗುತ್ತದೆ ಎಂಬುದು ನನಗೆ ಮನವರಿಕೆಯಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಐಪಿಎಲ್‌ ಮುಂದೂಡಿಕೆ ಕುರಿತಂತೆ ಮಾತನಾಡಿರುವ ಅವರು, ‘ಇದರಿಂದಾಗುವ ನಷ್ಟವನ್ನು ಭರಿಸುವಲ್ಲಿ ಭಾರತ ಸಫಲವಾಗುತ್ತದೆ. ಅದರೆ, ಇದೆಲ್ಲವೂ (ಕೊರೊನಾ ವೈರಸ್‌ ಪರಿಣಾಮ) ದುರದೃಷ್ಟಕರ’ ಎಂದಿದ್ದಾರೆ.

ಕಳೆದ ವಾರ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿದ್ದ ಅಖ್ತರ್, ಕೊರೊನಾ ವೈರಸ್‌ ಭೀತಿ ಉಂಟಾಗಲು ಕಾರಣ ಚೀನಿಯರ ಆಹಾರ ಪದ್ದತಿ ಎಂದು ದೂರಿದ್ದರು. ಐಪಿಎಲ್‌ ಟೂರ್ನಿಯನ್ನು ಬಿಸಿಸಿಐ ಮುಂದೂಡಿಕೆ ಮಾಡಿದ್ದು ಮತ್ತು ಪಿಸಿಬಿಯು ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಪಂದ್ಯಗಳನ್ನು ಆಯೋಜಿಸುವ ತೀರ್ಮಾನ ಕೈಗೊಂಡಿದ್ದರ ಕುರಿತು ಬೇಸರ ವ್ಯಕ್ತಪಡಿಸಿದ್ದರು.

‘ನನ್ನ ಕೋಪಕ್ಕೆ ಮುಖ್ಯ ಕಾರಣ ಪಿಎಸ್‌ಎಲ್‌ಗೆ ಸಂಬಂಧಿಸಿದ ನಿರ್ಧಾರ.ಹಲವು ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಲಾಗುತ್ತಿದೆ. ಸಂಕಷ್ಟದ ಸನ್ನಿವೇಶದ ನಡುವೆಯೂ ಇದೇ ಮೊದಲ ಸಲ ಪಾಕಿಸ್ತಾನದಲ್ಲಿ ಪಿಎಸ್‌ಎಲ್‌ ನಡೆಯುತ್ತಿದೆ. ಇದೀಗ ಆ ಟೂರ್ನಿಯ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ನೋಡಲು ಪ್ರೇಕ್ಷಕರಿಗೆ ಅವಕಾಶ ನಿರಾಕರಿಸುವ ಸ್ಥಿತಿ ಬಂದಿದೆ’ಎಂದು ಬೇಸರ ವ್ಯಕ್ತಪಡಿಸಿದ್ದರು.

‘ನೀವು ಯಾಕಾದರೂ ಬಾವಲಿಗಳನ್ನು ತಿನ್ನುವಿರೊ, ಅವುಗಳ ರಕ್ತ ಮತ್ತು ಮೂತ್ರ ಕುಡಿಯುತ್ತೀರೊ, ಇದರಿಂದಾಗಿ ವಿಶ್ವದಾದ್ಯಂತ ವೈರಸ್‌ ಸೋಂಕು ಹರಡುತ್ತಿದೆ. ನಾನು ಮಾತನಾಡುತ್ತಿರುವುದು ಚೀನಾ ಪ್ರಜೆಗಳ ಬಗ್ಗೆ. ಅವರು ಜಗತ್ತನ್ನೇ ಆತಂಕಕ್ಕೆ ದೂಡಿದ್ದಾರೆ. ಅದ್ಹೇಗೆ ನೀವು ಬಾವಲಿಗಳು, ಬೆಕ್ಕು ಮತ್ತು ನಾಯಿಗಳನ್ನು ತಿನ್ನುತ್ತೀರಿ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾನಂತು ಕೋಪಗೊಂಡಿದ್ದೇನೆ’ ಎಂದು ಕಿಡಿಕಾರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.