ADVERTISEMENT

ಐಪಿಎಲ್: ಆರಂಭದ ಪಂದ್ಯಗಳಿಗೆ ಋತುರಾಜ್‌ ಅಲಭ್ಯ?

ಪಿಟಿಐ
Published 13 ಸೆಪ್ಟೆಂಬರ್ 2020, 9:49 IST
Last Updated 13 ಸೆಪ್ಟೆಂಬರ್ 2020, 9:49 IST
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಲೋಗೊ
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಲೋಗೊ   

ದುಬೈ: ಕೋವಿಡ್‌–19 ಸೋಂಕಿತರಾಗಿದ್ದ,ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕವಾಡ್ ಅವರು ಮತ್ತೆ ಎರಡು ಬಾರಿ ಸೋಂಕು ತಪಾಸಣೆಗೆ ಒಳಗಾಗಲಿದ್ದು, ಐಪಿಎಲ್‌ ಟೂರ್ನಿಯ ಆರಂಭದ ಕೆಲವು ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ.

ಐಪಿಎಲ್‌ ಆಡಲು ಯುಎಇಗೆ ಬಂದಿಳಿದ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದ ಆಟಗಾರರಾದ ದೀಪಕ್‌ ಚಾಹರ್‌ ಗಾಯಕವಾಡ್‌ ಹಾಗೂ 11 ಸಿಬ್ಬಂದಿಯಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿತ್ತು. ಸದ್ಯ ಚಾಹರ್‌ ಹಾಗೂ 11 ಮಂದಿ ಸಿಬ್ಬಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಎರಡು ಕಡ್ಡಾಯ ಪರೀಕ್ಷೆಗಳ ಬಳಿಕ ತರಬೇತಿಯನ್ನು ಆರಂಭಿಸಿದ್ದಾರೆ.

‘ನಿಯಮಗಳ ಅನ್ವಯ ಋತುರಾಜ್ ಅವರು ಎರಡು ಬಾರಿ ಕೋವಿಡ್‌ ಪರೀಕ್ಷೆಗೆ ಒಳಗಾಗಲಿದ್ದಾರೆ. ಪರೀಕ್ಷಾ ವರದಿ ‘ನೆಗೆಟಿವ್‌’ ಬಂದರೆ ಅವರು ತಂಡವು ತಂಗಿರುವ ಹೊಟೇಲ್‌ಗೆ ಪ್ರವೇಶ ಪಡೆಯಲಿದ್ದಾರೆ. ಇತರ ಸಿಬ್ಬಂದಿಯು ಸೋಂಕಿನಿಂದ ಚೇತರಿಸಿಕೊಂಡಿದ್ದು ಈಗ ತಂಡದೊಂದಿಗೇ ಇದ್ದಾರೆ‘ ಎಂದು ಸಿಎಸ್‌ಕೆ ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಶಿ ವಿಶ್ವನಾಥನ್‌ ಹೇಳಿದ್ದಾರೆ.

ADVERTISEMENT

ಭಾರತ ಎ ತಂಡದಲ್ಲಿ ಆಡುವ ಗಾಯಕವಾಡ್‌ ಅವರನ್ನು, ಸಿಎಸ್‌ಕೆಯಲ್ಲಿ ಸುರೇಶ್‌ ರೈನಾ ಅವರ ಸ್ಥಾನ ತುಂಬಬಲ್ಲ ಆಟಗಾರ ಎಂದು ಹೇಳಲಾಗುತ್ತಿದೆ. ಆದರೆ ಋತುರಾಜ್‌ ಅವರು ಎರಡು ಬಾರಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವವರೆಗೆ ಸಿಎಸ್‌ಕೆ ಕಾಯುಬೇಕಾಗಿದೆ. ರೈನಾ ಅವರು ವೈಯಕ್ತಿಕ ಕಾರಣ ನೀಡಿ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಆಡುತ್ತಿಲ್ಲ.

ಋತುರಾಜ್‌ ಅವರು ಒಂದು ವಾರದ ಬಳಿಕ ಆಯ್ಕೆಗೆ ಲಭ್ಯವಿರುತ್ತಾರೆ. ಹೀಗಾಗಿ ಅವರು ಸೆಪ್ಟೆಂಬರ್‌ 19ರಂದು ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯ ಅಥವಾ ಇನ್ನೂ ಕೆಲವು ಪಂದ್ಯಗಳಲ್ಲಿ ಆಡದಿರುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.