ADVERTISEMENT

ಬಾಲ್ಕನಿಯಲ್ಲಿ ಕುಶಲೋಪರಿ ಹೊಟೇಲ್‌ನಲ್ಲೇ ಬಂದಿ!

ಆಟಗಾರರಿಂದ ಕೋವಿಡ್‌ ತಡೆ ನಿಯಮಗಳ ಪಾಲನೆ

ಪಿಟಿಐ
Published 21 ಆಗಸ್ಟ್ 2020, 20:37 IST
Last Updated 21 ಆಗಸ್ಟ್ 2020, 20:37 IST
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರಸಿಂಗ್‌ ಧೋನಿ ಹಾಗೂ ಸಹ ಆಟಗಾರರು ದುಬೈಗೆ ತೆರಳಲು ಶುಕ್ರವಾರ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದರು–ಎಎಫ್‌ಪಿ ಚಿತ್ರ
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರಸಿಂಗ್‌ ಧೋನಿ ಹಾಗೂ ಸಹ ಆಟಗಾರರು ದುಬೈಗೆ ತೆರಳಲು ಶುಕ್ರವಾರ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದರು–ಎಎಫ್‌ಪಿ ಚಿತ್ರ   

ದುಬೈ:ಕೊರೊನಾ ವೈರಸ್‌ ಕರಿನೆರಳಿನ ಅಡಿಯಲ್ಲೇ ಐಪಿಎಲ್‌ ಆಡಲು ದುಬೈಗೆ ಬಂದಿರುವ ವಿವಿಧ ತಂಡಗಳ ಆಟಗಾರರು ಮೊದಲ ದಿನ ಹೋಟೆಲ್‌ನ ತಮ್ಮ ಬಾಲ್ಕನಿಯ ಮೂಲಕವೇ ಉಭಯಕುಶಲೋಪರಿ ವಿಚಾರಿಸಿಕೊಂಡರು.

ಆಟಗಾರರು ಆರು ದಿನ ಹೋಟೆಲ್‌ ಕೋಣೆಗಳಿಗೇ ಸೀಮಿತವಾಗಬೇಕು ಎಂದು ಸೂಚಿಸಲಾಗಿದೆ. ತರಬೇತು ದಾರರು ಫಿಟ್‌ನೆಸ್ ಮಾರ್ಗದರ್ಶಿ ಸೂತ್ರಗಳನ್ನು ಆಟಗಾರರ ಕೈಗಿಟ್ಟಿದ್ದಾರೆ.

ರಾಜಸ್ತಾನ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ಆಟಗಾರರು ಗುರುವಾರ ಸಂಜೆ ದುಬೈಗೆ ಆಗಮಿಸಿದರೆ, ಕೋಲ್ಕತ್ತ ನೈಟ್ ರೈಡರ್ಸ್ ತಂಡ ರಾತ್ರಿ ಅಬುಧಾಬಿಗೆ ಬಂದಿಳಿಯಿತು.

ADVERTISEMENT

ಬಿಸಿಸಿಐ ವಿಧಿಸಿರುವ ನಿಯಮಗಳ ಪ್ರಕಾರ ರಾಯಲ್ಸ್‌ ತಂಡ ವಿಮಾನ ನಿಲ್ದಾಣದಲ್ಲಿಯೇ ಕೋವಿಡ್‌ ಪರೀಕ್ಷೆಗೆ ಒಳಗಾಯಿತು. ಪಂಜಾಬ್‌ ತಂಡ ಶುಕ್ರವಾರ ಮತ್ತೊಮ್ಮೆ ಪರೀಕ್ಷೆಗೆ ಒಳಪಟ್ಟಿತು.

ಬಿಸಿಸಿಐ ರೂಪಿಸಿರುವ ಕೋವಿಡ್‌ ನಿಯಮಾವಳಿಗಳ ಪ್ರಕಾರ 1, 3 ಮತ್ತು 6 ನೇ ದಿನದಂದು ಆಟಗಾರರ ಪರೀಕ್ಷೆ ನಡೆಸಲಾಗುತ್ತದೆ. ಅದರ ನಂತರ ತಂಡಗಳು ತರಬೇತಿಯನ್ನು ಪ್ರಾರಂಭಿಸಬಹುದು.

ಸದ್ಯ ದುಬೈಗೆ ಬಂದಿಳಿದಿರುವ ಆಟಗಾರರು ಆರುದಿನಗಳ ಕಾಲ ಹೋಟೆಲ್‌ನ ಕೊಠಡಿಗಳಲ್ಲೇ ಬಂದಿ ಯಾಗಿರಬೇಕು. ಹೋಟೆಲ್‌ನ ಬಾಲ್ಕನಿ ಮೂಲಕ ಆಟಗಾರರು ಪರಸ್ಪರ ಮಾತನಾಡಿಕೊಳ್ಳಬಹುದು. ಆದರೆ, ಅಂತರ ಪಾಲಿಸುವುದು ಕಡ್ಡಾಯ ಎಂದು ಬಿಸಿಸಿಐ ಆಟಗಾರರಿಗೆ ಸೂಚಿಸಿದೆ.

ಆಟಗಾರರು ಕೋಣೆಗೆ ಪರ್ಯಾಯವಾಗಿ ಹೊರಾಂಗಣವನ್ನು ಬಳಸಲು ಅವಕಾಶವಿದೆ. ಒಬ್ಬ ಆಟಗಾರ ಬರುವಾಗ ಇನ್ನೊಬ್ಬ ಆಟಗಾರ ಹೊರಾಂಗಣದಲ್ಲಿ ಇರುವಂತಿಲ್ಲ ಎಂದು ತಿಳಿಸಲಾಗಿದೆ.

ಕೋವಿಡ್‌ ನಿಯಮಾವಳಿಗಳ ಅನ್ವಯ ತಾವು ತಂಗಿರುವ ಹೋಟೆಲ್‌ನಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ರಾಜಸ್ಥಾನ ರಾಯಲ್ಸ್‌ ತಂಡದ ವೇಗಿ ಜೈದೇವ್‌ ಉನದ್ಕತ್‌ ಅವರು ಸಾಮಾಜಿಕ ತಾಣದಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಏರ್‌ ಸೈಕಲ್‌ ಮೂಲಕ ಕಸರತ್ತು ಹಾಗೂ ಹೊರಾಂಗಣದಲ್ಲಿ ಯೋಗ ಮಾಡಿರುವ ವಿಡಿಯೊವನ್ನು ಅವರು ಪೋಸ್ಟ್‌ ಮಾಡಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಮುಂಬೈ ಇಂಡಿಯನ್ಸ್‌ ಶುಕ್ರವಾರ ಭಾರತದಿಂದ ದುಬೈಗೆ ಪ್ರಯಾಣ ಬೆಳೆಸಿದವು. ದೆಹಲಿ ಕ್ಯಾಪಿಟಲ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಈ ವಾರಾಂತ್ಯದಲ್ಲಿ ಯುಎಇಗೆ ತೆರಳಲಿವೆ.

ದುಬೈ ತಲುಪಿದ ಆರ್‌ಸಿಬಿ
ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರು ಶುಕ್ರವಾರ ದುಬೈಗೆ ತಲುಪಿತು.

ಬೆಂಗಳೂರಿನಿಂದ ಹೊರಟ ತಂಡವು ಸಂಜೆಯ ವೇಳೆಗೆ ದುಬೈ ತಲುಪಿತು. ಹೋಟೆಲ್‌ನಲ್ಲಿ ಕ್ಕಿಕ್ಕಿಸಿದ ಚಿತ್ರವನ್ನು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಒಂದು ವಾರ ಕ್ವಾರಂಟೈನ್‌ ಮತ್ತು ಕೋವಿಡ್ ಪರೀಕ್ಷೆಗಳನ್ನು ಮುಗಿಸಿದ ನಂತರ ಆರ್‌ಸಿಬಿ ತಂಡವು ತಾಲೀಮು ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.