ADVERTISEMENT

IPL| ಪ್ಲೇ ಆಫ್‌ ಪ್ರವೇಶಿಸುವ ‘ಗುರಿ’ ಸಿಕ್ಕಿದ್ದು 11ನೇ ಓವರ್‌ನಲ್ಲಿ: ಕೊಹ್ಲಿ

ಏಜೆನ್ಸೀಸ್
Published 3 ನವೆಂಬರ್ 2020, 16:55 IST
Last Updated 3 ನವೆಂಬರ್ 2020, 16:55 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಅಬುಧಾಬಿ: ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ತಂಡವು ಸ್ವಲ್ಪ ಎಚ್ಚರ ತಪ್ಪಿದ್ದರೂ ಪ್ಲೇ ಆಫ್‌ ಹಾದಿ ದುರ್ಗಮವಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ, ಪಂದ್ಯದಲ್ಲಿ 11ನೇ ಓವರ್‌ನಲ್ಲಿ ತಿಳಿದ ಲೆಕ್ಕಾಚಾರದಿಂದ ಆ ಅಪಾಯ ತಪ್ಪಿತು ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ’ ನಮ್ಮ ತಂಡವು ಗುರಿ ನೀಡಿತ್ತು. ಆದರೆ, 17.3ನೇ ಓವರ್‌ಗಳ ಒಳಗೇ ಸೋತಿದ್ದರೆ, ನೆಟ್ ರನ್‌ರೇಟ್‌ ಕುಸಿತವಾಗುತ್ತಿತ್ತು. ಈ ವಿಷಯ ನನಗೆ ತಿಳಿದಿದ್ದು 11ನೇ ಓವರ್‌ ನಡೆಯುವಾಗ. ಆದರೆ ನಮ್ಮ ಚಿತ್ತ ಗೆಲುವಿನತ್ತ ಇದ್ದ ಕಾರಣ ಡೆಲ್ಲಿಗೆ ಜಯ ಸುಲಭವಾಗಲಿಲ್ಲ. ನಾವೂ ಸೋತರೂ ಸುರಕ್ಷಿತವಾದೆವು‘ ಎಂದಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 152 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಡೆಲ್ಲಿ ಅನುಭವಿ ಶಿಖರ್‌ ಧವನ್‌ (54) ಮತ್ತು ಅಜಿಂಕ್ಯ ರಹಾನೆ (60) ಗಳಿಸಿದ ಅರ್ಧಶತಕಗಳ ನೆರವಿನಿಂದ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಗೆದ್ದು ಬೀಗಿತ್ತು. ಈ ಪಂದ್ಯವು 19 ಓವರ್‌ಗಳವರೆಗೆ ಸಾಗಿದ ಕಾರಣ, ಕೊಹ್ಲಿ ಪಡೆ ಸೋಲು ಕಂಡರೂರನ್‌ರೇಟ್ ಆಧಾರದಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ.

ADVERTISEMENT

’11ನೇ ಓವರ್‌ ವೇಳೆ ತಂಡದ ಆಡಳಿತವು ವಿಷಯ ತಿಳಿಸಿತು. ಅದಾಗಲೇ ಪಂದ್ಯ ನಮ್ಮ ಕೈಯಿಂದ ಜಾರಿದರೂ, ನಂತರದ ಹಂತದಲ್ಲಿ ಹೋರಾಟ ಮಾಡಿ ನಿಯಂತ್ರಣ ಸಾಧಿಸುವ ಪ್ತಯತ್ನ ಮಾಡಿದೆವು. ಪ್ಲೇ ಆಫ್‌ಗೆ ಅರ್ಹತೆ ಪಡೆದಿರುವುದರಿಂದ ನಮಗೆ ಸಂತಸವಾಗಿದೆ‘ ಎಂದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, 16 ಅಂಕಗಳನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಆಡಲಿದೆ. ಈ ಪಂದ್ಯವು ಇದೇ 5 ರಂದು ದುಬೈನಲ್ಲಿ ನಡೆಯಲಿದೆ.ಆರ್‌ಸಿಬಿ 14 ಅಂಕಗಳೊಂದಿಗೆ 3ನೇ
ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.