ರವೀಂದ್ರ ಜಡೇಜ ಆಲ್ರೌಂಡರ್ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಎರಡು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಅಂತಿಮ ಹಂತದಲ್ಲಿ ಕೇವಲ ಎಂಟು ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 22 ರನ್ ಗಳಿಸಿದ ರವೀಂದ್ರ ಜಡೇಜ, ಚೆನ್ನೈ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ದೀಪಕ್ ಚಾಹರ್ ಗೆಲುವಿನ ರನ್ ಬಾರಿಸಿದರು.
15 ಓವರ್ ಅಂತ್ಯಕ್ಕೆ ಚೆನ್ನೈ ಮೂರು ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತ್ತು. ಅಂತಿಮ 30 ಎಸೆತಗಳಲ್ಲಿ ಗೆಲುವಿಗೆ 45 ರನ್ಗಳ ಅವಶ್ಯಕತೆಯಿತ್ತು.
ಉತ್ತಮವಾಗಿ ಆಡುತ್ತಿದ್ದ ಡು ಪ್ಲೆಸಿ ಅವರ ವಿಕೆಟನ್ನು ಪ್ರಸಿದ್ಧ ಕೃಷ್ಣ ಗಳಿಸಿದರು. ಈ ವೇಳೆ ಚೆನ್ನೈ 11.3 ಓವರ್ಗಳಲ್ಲಿ 102 ರನ್ ಗಳಿಸಿತ್ತು.
10 ಓವರ್ ಅಂತ್ಯಕ್ಕೆ ಚೆನ್ನೈ ಒಂದು ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತ್ತು. ಫಾಫ್ ಡು ಪ್ಲೆಸಿ ಹಾಗೂ ಮೊಯಿನ್ ಅಲಿ ಕ್ರೀಸಿನಲ್ಲಿದ್ದರು.
ಋತುರಾಜ್ ಗಾಯಕವಾಡ್ ಹಾಗೂ ಫಾಫ್ ಡು ಪ್ಲೆಸಿ ಮೊದಲ ವಿಕೆಟ್ಗೆ 8.2 ಓವರ್ಗಳಲ್ಲಿ 74 ರನ್ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ 28 ಎಸೆತಗಳಲ್ಲಿಎರಡು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 40 ರನ್ ಗಳಿಸಿದ ಗಾಯಕವಾಡ್ ಔಟಾದರು.
172 ರನ್ಗಳ ಗುರಿ ಬೆನ್ನತ್ತಿದ ಚೆನ್ನೈ ತಂಡವು ದಿಟ್ಟ ಉತ್ತರವನ್ನೇ ನೀಡಿದೆ. ಓಪನರ್ಗಳಾದ ಋತುರಾಜ್ ಗಾಯಕವಾಡ್ ಹಾಗೂ ಫಾಫ್ ಡು ಪ್ಲೆಸಿ ಆಕರ್ಷಕ ಆಟದ ಮೂಲಕ ಗಮನ ಸೆಳೆದರು. ಪವರ್ ಪ್ಲೇ ಅಂತ್ಯಕ್ಕೆ ಚೆನ್ನೈ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿರುವ ಕೋಲ್ಕತ್ತ ನೈಟ್ ರೈಡರ್ಸ್, ನಿಗದಿತ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 171 ರನ್ಗಳ ಸವಾಲಿನ ಮೊತ್ತ ಪೇರಿಸಿದೆ.
ಕೆಕೆಆರ್ ಪರ ರಾಹುಲ್ ತ್ರಿಪಾಠಿ (45), ನಿತೀಶ್ ರಾಣಾ (37*), ಆ್ಯಂಡ್ರೆ ರಸೆಲ್ (20) ಹಾಗೂ ದಿನೇಶ್ ಕಾರ್ತಿಕ್ (26) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಚೆನ್ನೈ ಪರ ಶಾರ್ದೂಲ್ ಠಾಕೂರ್ ಹಾಗೂ ಜೋಶ್ ಹೇಜಲ್ವುಡ್ ತಲಾ ಎರಡು ವಿಕೆಟ್ ಗಳಿಸಿದರು.
ಈ ನಡುವೆ ಉತ್ತಮವಾಗಿ ಆಡುತ್ತಿದ್ದ ರಾಹುಲ್ ತ್ರಿಪಾಠಿ ಸ್ಪಿನ್ನರ್ ರವೀಂದ್ರ ಜಡೇಜ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆದರು. 45 ರನ್ ಗಳಿಸಿದ ತ್ರಿಪಾಠಿ ಅರ್ಧಶತಕ ವಂಚಿತರಾದರು. 15 ಓವರ್ ಅಂತ್ಯಕ್ಕೆ ಕೆಕೆಆರ್ ನಾಲ್ಕು ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತ್ತು.
10 ಓವರ್ ಅಂತ್ಯಕ್ಕೆ ಕೆಕೆಆರ್ ಮೂರು ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿತ್ತು. ಈ ನಡುವೆ ಡು ಪ್ಲೆಸಿ ಅದ್ಭುತ ಕ್ಯಾಚ್ನಿಂದಾಗಿ ಏಯಾನ್ ಮಾರ್ಗನ್ (8) ವಿಕೆಟ್ ಪತನವಾಯಿತು.
ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ ಕೋಲ್ಕತ್ತಗೆ ಆಘಾತ ಎದುರಾಗಿತ್ತು. 9 ರನ್ ಗಳಿಸಿದ ಶುಭಮನ್ ಗಿಲ್ ರನೌಟ್ ಆದರು.
ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಏಯಾನ್ ಮಾರ್ಗನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.