ADVERTISEMENT

IPL 2021: ಆತ್ಮವಿಶ್ವಾಸ ತುಂಬಿದ ವಿರಾಟ್; ಲಯಕ್ಕೆ ಮರಳಿ ಕಿಶನ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 11:50 IST
Last Updated 6 ಅಕ್ಟೋಬರ್ 2021, 11:50 IST
ಇಶಾನ್ ಕಿಶನ್ ಹಾಗೂ ವಿರಾಟ್ ಕೊಹ್ಲಿ
ಇಶಾನ್ ಕಿಶನ್ ಹಾಗೂ ವಿರಾಟ್ ಕೊಹ್ಲಿ    

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ ಅಜೇಯ ಅರ್ಧಶತಕ ಬಾರಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅಮೋಘ ಲಯಕ್ಕೆ ಮರಳಿದ್ದಾರೆ.

ಈ ಕುರಿತು ಪಂದ್ಯದ ಬಳಿಕ ಪ್ರತಿಕ್ರಿಯಿಸಿರುವ ಇಶಾನ್, ಆತ್ಮವಿಶ್ವಾಸ ಮರಳಿ ಪಡೆಯುವಲ್ಲಿವಿರಾಟ್ ಕೊಹ್ಲಿ ನೆರವಾಗಿದ್ದಾರೆ ಎಂದು ಹೇಳಿದ್ದಾರೆ.

'ಆರಂಭಿಕನಾಗಿ ಕ್ರೀಸಿಗಿಳಿದು ರನ್ ಗಳಿಸಲು ಸಾಧ್ಯವಾಗಿರುವುದು ಉತ್ತಮ ಭಾವನೆಯನ್ನುಂಟು ಮಾಡಿದೆ. ಮೊದಲು ಫೀಲ್ಡಿಂಗ್ ಮಾಡಿದ್ದರಿಂದ ವಿಕೆಟ್ ವರ್ತನೆಯ ಬಗ್ಗೆ ಅಂದಾಜಿಸಲು ಸಾಧ್ಯವಾಯಿತು. ಕ್ರೀಡಾಪಟುವಿನ ಜೀವನದಲ್ಲಿ ಏಳು-ಬೀಳುಗಳು ಸಹಜ' ಎಂದು ಹೇಳಿದ್ದಾರೆ.

'ಸತತ ವೈಫಲ್ಯಗಳ ಬಳಿಕ ನಾನು ವಿರಾಟ್ ಭಾಯ್, ಹಾರ್ದಿಕ್ ಭಾಯ್ (ಹಾರ್ದಿಕ್ ಪಾಂಡ್ಯ) ಹಾಗೂ ಕೆ.ಪಿ (ಕೀರನ್ ಪೊಲಾರ್ಡ್) ಅವರಲ್ಲಿ ಸಮಾಲೋಚನೆ ನಡೆಸಿದ್ದೇನೆ. ಅವರೆಲ್ಲರು ನನಗೆ ಆತ್ಮವಿಶ್ವಾಸವನ್ನು ತುಂಬಿದರು. ವಿಷಯವನ್ನು ಸರಳವಾಗಿಟ್ಟುಕೊಂಡು ಮುಂದಿನ ಪಂದ್ಯದತ್ತ ಗಮನಹರಿಸಲು ಸೂಚಿಸಿದರು. ಆತ್ಮವಿಶ್ವಾಸ ಮರಳಿ ಪಡೆಯಲು ನನ್ನ ಹಳೆಯ ವಿಡಿಯೊಗಳನ್ನು ವೀಕ್ಷಿಸಿದ್ದೇನೆ' ಎಂದು ವಿವರಿಸಿದರು.

ಏತನ್ಮಧ್ಯೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಮುಂಬೈ ಇಂಡಿಯನ್ಸ್, ಪ್ಲೇ-ಆಫ್ ಕನಸು ಜೀವಂತವಾಗಿದೆ.

ಇಶಾನ್ ಕಿಶನ್, ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾದ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.