ನವದೆಹಲಿ: ಮುಂದಿನ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಪುನರಾಗಮನ ಮಾಡುವುದಾಗಿ ತಿಳಿಸಿರುವ ವೆಸ್ಟ್ ಇಂಡೀಸ್ನ ದೈತ್ಯ ಕ್ರಿಸ್ ಗೇಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಟ್ರೋಫಿ ಗೆಲ್ಲಲು ಇಷ್ಟಪಡುವುದಾಗಿ ಹೇಳಿದ್ದಾರೆ.
'ಮುಂದಿನ ವರ್ಷ ನಾನು ಐಪಿಎಲ್ನಲ್ಲಿ ಆಡುತ್ತೇನೆ. ಅವರಿಗೆ ನನ್ನ ಅಗತ್ಯವಿದೆ. ಐಪಿಎಲ್ನಲ್ಲಿ ನಾನು ಆರ್ಸಿಬಿ, ಕೆಕೆಆರ್ ಹಾಗೂ ಪಂಜಾಬ್ ತಂಡಗಳನ್ನು ಪ್ರತಿನಿಧಿಸಿದ್ದೇನೆ. ಆರ್ಸಿಬಿ ಅಥವಾ ಪಂಜಾಬ್ ತಂಡಕ್ಕಾಗಿ ಪ್ರಶಸ್ತಿ ಗೆಲ್ಲಲು ಇಷ್ಟಪಡುತ್ತೇನೆ. ನಾನು ಐಪಿಎಲ್ನಲ್ಲಿಆರ್ಸಿಬಿ ಜೊತೆ ಹೆಚ್ಚಿನ ಯಶಸ್ಸು ಕಂಡಿದ್ದೇನೆ. ಪಂಜಾಬ್ ಪರವೂ ಉತ್ತಮ ನಿರ್ವಹಣೆ ನೀಡಿದ್ದೇನೆ. ಹೊಸ ಸವಾಲುಗಳನ್ನು ಎದುರಿಸಲು ಇಷ್ಟಪಡುತ್ತೇನೆ. ಮುಂದೇನಾಗುತ್ತೆ ನೋಡೋಣ' ಎಂದು ಹೇಳಿದ್ದಾರೆ.
ಆದರೆ ಐಪಿಎಲ್ನಲ್ಲಿ ಕಳೆದೆರಡು ವರ್ಷ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಗೇಲ್ ಆರೋಪಿಸಿದರು. 'ಐಪಿಎಲ್ಗಾಗಿ ಇಷ್ಟೊಂದು ಕೊಡುಗೆ ನೀಡಿದ ಬಳಿಕ ನನಗೆ ಅರ್ಹವಾದ ಗೌರವ ಸಿಗಲಿಲ್ಲ ಎಂದು ಭಾವಿಸಿದೆ. ಹಾಗಾಗಿ ಐಪಿಎಲ್ ಹರಾಜು ಡ್ರಾಫ್ಟ್ನಲ್ಲಿ ನನ್ನ ಹೆಸರು ನಮೂದಿಸುವ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.