ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಮತ್ತೆ ಮಹೇಂದ್ರ ಸಿಂಗ್ ಧೋನಿ ಅವರಿಗೆ ರವೀಂದ್ರ ಜಡೇಜ ಹಸ್ತಾಂತರಿಸಿದ್ದಾರೆ.
ಈ ಕುರಿತು ಸಿಎಸ್ಕೆ ಫ್ರಾಂಚೈಸ್ನ ಅಧಿಕೃತ ಪ್ರಕಟಣೆ ತಿಳಿಸಿದೆ.
ಐಪಿಎಲ್ 2022 ಟೂರ್ನಿ ಆರಂಭಕ್ಕೂ ಮುನ್ನ ತಂಡದ ಭವಿಷ್ಯದ ಕಪ್ತಾನ ರೂಪಿಸುವ ನಿಟ್ಟಿನಲ್ಲಿ ಆಲ್ರೌಂಡರ್ ಜಡೇಜ ಅವರಿಗೆ ದೋನಿ ನಾಯಕತ್ವ ಹಸ್ತಾಂತರಿಸಿದ್ದರು.
ಆದರೆ ನಾಯಕತ್ವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ರವೀಂದ್ರ ಜಡೇಜ ವಿಫಲರಾಗಿದ್ದರು.
ಈ ಹಿನ್ನೆಲೆಯಲ್ಲಿ ಆಟದ ಮೇಲೆ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಮತ್ತೆ ಧೋನಿಗೆ ನಾಯಕತ್ವ ಹಸ್ತಾಂತರಿಸಲು ಜಡೇಜ ನಿರ್ಧರಿಸಿದ್ದಾರೆ.
ಜಡೇಜ ಮುಂದಾಳತ್ವದಲ್ಲಿ ಚೆನ್ನೈ ಇದುವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಅಲ್ಲದೆ ನಾಲ್ಕು ಅಂಕ ಮಾತ್ರ ಗಳಿಸಿ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
2008ರಿಂದ 2021ರವರೆಗೆ ಚೆನ್ನೈ ತಂಡವನ್ನು ಮುನ್ನಡೆಸಿದ್ದ ಧೋನಿ, ನಾಲ್ಕು ಬಾರಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈಗ ಜಡೇಜ ವಿನಂತಿಗೆ ಸ್ಪಂದಿಸಿ ಮತ್ತೆ ಸಿಎಸ್ಕೆ ಕಪ್ತಾನಗಿರಿ ವಹಿಸಲು ತಯಾರಾಗಿರುವುದಾಗಿ ಧೋನಿ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.