ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೇವಲ ಎಂಟು ರನ್ ಅಂತರದಿಂದ ಐದನೇ ಶತಕ ಗಳಿಸುವ ಅವಕಾಶದಿಂದ ಡೇವಿಡ್ ವಾರ್ನರ್ ವಂಚಿತರಾಗಿದ್ದರು.
ಗುರುವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, ಇನ್ನಿಂಗ್ಸ್ನ ಕೊನೆಯವರೆಗೂ ಔಟಾಗದೆ ಉಳಿದರೂ ಶತಕ ಗಳಿಸಲು ಯಶಸ್ವಿಯಾಗಿರಲಿಲ್ಲ.
ಕೊನೆಯ ಓವರ್ನಲ್ಲಿ ಒಂದು ರನ್ ಗಳಿಸಿ ಶತಕ ಗಳಿಸಲು ಅವಕಾಶ ನೀಡುವುದಾಗಿ ಸಹ ಆಟಗಾರ ರೋವ್ಮನ್ ಪೊವೆಲ್ ಹೇಳಿದ್ದರು. ಆದರೆ ಇದನ್ನು ನಿರಾಕರಿಸಿದ ವಾರ್ನರ್, ನಿಸ್ವಾರ್ಥ ಆಟದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಈ ಕುರಿತು ಪೊವೆಲ್ ಬಹಿರಂಗಪಡಿಸಿದ್ದಾರೆ. 'ಕೊನೆಯ ಓವರ್ನಲ್ಲಿ ನಾನು ಒಂಟಿ ರನ್ ಗಳಿಸಿ ಸ್ಟ್ರೈಕ್ ನೀಡುವುದಾಗಿ ಹೇಳಿದ್ದೆ. ನೋಡಿ, ಇದು ಕ್ರಿಕೆಟ್ ಆಡುವ ವಿಧಾನವಲ್ಲ. ನೀವು ಸಾಧ್ಯವಾದಷ್ಟು ರನ್ ಗಳಿಸಲು ಪ್ರಯತ್ನಿಸಬೇಕು ಎಂದು ವಾರ್ನರ್ ಹೇಳಿದರು. ಕೊನೆಗೆ ನಾನು ಅದನ್ನೇ ಮಾಡಿದ್ದೆ' ಎಂದು ತಿಳಿಸಿದ್ದಾರೆ.
ಉಮ್ರಾನ್ ಮಲಿಕ್ ಅವರ ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ ಪೊವೆಲ್ 19 ರನ್ ಗಳಿಸಿದ್ದರು. ಈ ಮೂಲಕ 35 ಎಸೆತಗಳಲ್ಲಿ 67 ರನ್ ಗಳಿಸಿ (6 ಸಿಕ್ಸರ್, 3 ಬೌಂಡರಿ) ಅಜೇಯರಾಗುಳಿದರು.
ಅತ್ತ ವಾರ್ನರ್ 58 ಎಸೆತಗಳಲ್ಲಿ 92 ರನ್ (12 ಬೌಂಡರಿ, 3 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು.
ಬಳಿಕ ಡೆಲ್ಲಿ ಒಡ್ಡಿದ 208 ಗುರಿ ಬೆನ್ನಟ್ಟಿದ ಹೈದರಾಬಾದ್ ಎಂಟು ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ ಡೆಲ್ಲಿ 21 ರನ್ ಅಂತರದ ಗೆಲುವು ದಾಖಲಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.