ADVERTISEMENT

ಐಪಿಎಲ್‌ನಲ್ಲಿ ಮಗ ಅರ್ಜುನ್‌ಗೆ ಸಿಗದ ಅವಕಾಶ: ಸಚಿನ್ ತೆಂಡೂಲ್ಕರ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮೇ 2022, 16:27 IST
Last Updated 24 ಮೇ 2022, 16:27 IST
ಅರ್ಜುನ್‌ ಮತ್ತು ಸಚಿನ್ ತೆಂಡೂಲ್ಕರ್
ಅರ್ಜುನ್‌ ಮತ್ತು ಸಚಿನ್ ತೆಂಡೂಲ್ಕರ್    

ಮುಂಬೈ: ಈ ಬಾರಿಯ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್) 2022 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಪರ ಲೀಗ್ ಪಂದ್ಯಗಳಲ್ಲಿ ಕಣಕ್ಕಿಳಿಯದ ಪುತ್ರ ಅರ್ಜುನ್‌ ಬಗ್ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮೌನ ಮುರಿದಿದ್ದಾರೆ.

ಮಂಗಳವಾರ ಯುಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿರುವ ಮುಂಬೈ ಇಂಡಿಯನ್ಸ್‌ ತಂಡದ ಮಾರ್ಗದರ್ಶಕ ಸಚಿನ್, ಪುತ್ರ ಅರ್ಜುನ್‌ಗೆ ನೀಡಿದ ಸಲಹೆಯನ್ನು ಬಹಿರಂಗಪಡಿಸಿದ್ದಾರೆ.

‘ಅರ್ಜುನ್‌ಗೆ ಕೇವಲ ತಮ್ಮ ಆಟದ ಮೇಲೆ ಕೇಂದ್ರೀಕರಿಸುವಂತೆ ಸಲಹೆ ನೀಡಿದ್ದೆ. ಆಡುವ ಹನ್ನೊಂದರ ಬಳಗದ ಬಗ್ಗೆ ಹೆಚ್ಚು ಯೋಚಿಸದಂತೆ ಸಲಹೆ ನೀಡಿದ್ದೆ’ ಎಂದು ಸಚಿನ್ ವಿವರಿಸಿದ್ದಾರೆ.

ADVERTISEMENT

ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಎಡಗೈ ಮಧ್ಯಮ ವೇಗಿ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ₹30 ಲಕ್ಷಕ್ಕೆ ಖರೀದಿಸಿತ್ತು. ಆದರೆ, ಲೀಗ್ ಹಂತದ ಪಂದ್ಯಗಳಲ್ಲಿ ಅರ್ಜುನ್‌ಗೆ ಅವಕಾಶ ಸಿಕ್ಕಿರಲಿಲ್ಲ.

‘ಅವನಿಗೆ (ಅರ್ಜುನ್) ತನ್ನ ಆಟದ ಮೇಲೆ ಮಾತ್ರ ಕೇಂದ್ರೀಕರಿಸುವಂತೆ ಸಲಹೆ ನೀಡಿದ್ದೇನೆ. ಆಡಳಿತ ಮಂಡಳಿ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತದೆ. ಆ ವಿಚಾರದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ’ ಎಂದು ಸಚಿನ್ ಹೇಳಿಕೊಂಡಿದ್ದಾರೆ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಆಡಿರುವ 14 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದು, 10 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಾಯಿಂಟ್ಸ್‌ ಪಟ್ಟಿಯಲ್ಲಿ ಕ್ರಮವಾಗಿ ಕೊನೆ ಸ್ಥಾನದಲ್ಲಿದೆ. ಟೂರ್ನಿ ಆರಂಭದಿಂದ ಸ್ಥಿರ ಪ್ರದರ್ಶನ ನೀಡಲು ಎಡವಿದ್ದ ಮುಂಬೈ, ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.