ಜಸ್ಪ್ರೀತ್ ಬೂಮ್ರಾ
(ಚಿತ್ರ ಕೃಪೆ: X/@mipaltan)
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಏಪ್ರಿಲ್ 7ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಬಲಗೈ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಆಯ್ಕೆಗೆ ಲಭ್ಯರಿರುತ್ತಾರೆ ಎಂದು ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಖಚಿತಪಡಿಸಿದ್ದಾರೆ.
'ಹೌದು, ಬೂಮ್ರಾ ಆಯ್ಕೆಗೆ ಲಭ್ಯರಿರುತ್ತಾರೆ. ಇಂದು ಅಭ್ಯಾಸವನ್ನು ನಡೆಸಿದ್ದಾರೆ' ಎಂದು ಮಹೇಲಾ ಜಯವರ್ಧನೆ ತಿಳಿಸಿದ್ದಾರೆ.
ಇದರೊಂದಿಗೆ ಗಾಯದಿಂದಾಗಿ ಕಳೆದ ಕೆಲವು ತಿಂಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರವುಳಿದಿದ್ದ ಬೂಮ್ರಾ, ಪುನರಾಗಮನ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.
ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಬೆನ್ನು ನೋವಿಗೆ ತುತ್ತಾಗಿದ್ದ ಬೂಮ್ರಾ, ಅಲ್ಲಿಂದ ಬಳಿಕ ವಿಶ್ರಾಂತಿಯಲ್ಲಿದ್ದರು.
ಇದರಿಂದಾಗಿ ಮುಂಬೈ ತಂಡದ ಆರಂಭಿಕ ನಾಲ್ಕು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇಂದು (ಭಾನುವಾರ) ಬೂಮ್ರಾ ಮುಂಬೈ ತಂಡವನ್ನು ಸೇರಿದ್ದಾರೆ.
ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ಏಕದಿನ ಸರಣಿಯಿಂದಲೂ ಬೂಮ್ರಾ ಹೊರಗುಳಿದಿದ್ದರು.
ರೋಹಿತ್ ಫಿಟ್ ಆಗುವ ನಿರೀಕ್ಷೆ...
ಗಾಯದಿಂದಾಗಿ ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಸಹ ಆರ್ಸಿಬಿ ವಿರುದ್ಧದ ಪಂದ್ಯಕ್ಕೆ ಲಭ್ಯರಾಗುವ ನಿರೀಕ್ಷೆಯಿದೆ ಎಂದು ಜಯವರ್ಧನೆ ತಿಳಿಸಿದ್ದಾರೆ.
ತಂಡದಲ್ಲಿ ಯಾವುದೇ ಆಟಗಾರಿರಿಗೆ ಗಾಯದ ಆತಂಕಗಳಿಲ್ಲ. ರೋಹಿತ್ ಇಂದು ನೆಟ್ಸ್ನಲ್ಲಿ ಅಭ್ಯಾಸ ನಡೆಸಿದ್ದಾರೆ ಎಂದು ಜಯವರ್ಧನೆ ತಿಳಿಸಿದ್ದಾರೆ.
ಮುಂಬೈ ಹಾಗೂ ಆರ್ಸಿಬಿ ನಡುವಣ ಪಂದ್ಯವು ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.