
ಹುಬ್ಬಳ್ಳಿಯ ರಾಜನಗರದ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯ ಶನಿವಾರ ಕರ್ನಾಟಕ ಎದುರಿನ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಜಯ ಗಳಿಸಿದ ಸಂಭ್ರಮ. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ವೀಕ್ಷಿಸಿದರು ಉಪಸ್ಥಿತರಿದ್ದರು
-ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಹುಬ್ಬಳ್ಳಿ: ಜಮ್ಮು–ಕಾಶ್ಮೀರದ ಕ್ರಿಕೆಟ್ ಕ್ಷೇತ್ರದಲ್ಲಿ ಶನಿವಾರದಿಂದ ಹೊಸ ಶಕೆ ಆರಂಭವಾಯಿತು. 67 ವರ್ಷಗಳಲ್ಲಿ ಮೊದಲ ಸಲ ಅಲ್ಲಿಯ ತಂಡವು ರಣಜಿ ಟ್ರೋಫಿ ಗೆದ್ದಿತು.
ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಪಾರಸ್ ಡೋಗ್ರಾ ಬಳಗವು ಟ್ರೋಫಿ ಎತ್ತಿ ಹಿಡಿದಾಗ, ಆಟಗಾರರು, ನೆರವು ಸಿಬ್ಬಂದಿ ಮತ್ತು ಗಣ್ಯರ ಗ್ಯಾಲರಿಯಲ್ಲಿದ್ದ ಆ ರಾಜ್ಯದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಕಂಗಳಲ್ಲಿ ಭಾವುಕತೆಯ ಹನಿಗಳು ಜಿನುಗಿದವು.
ಡೋಗ್ರಾ ಬಳಗವು ಎಂಟು ಸಲದ ಚಾಂಪಿಯನ್ ಕರ್ನಾಟಕ ತಂಡವನ್ನು ತಾಳ್ಮೆ ಮತ್ತು ಯೋಜನಾಬದ್ಧ ಆಟದ ಮೂಲಕ ಕಟ್ಟಿಹಾಕಿತು. ಡ್ರಾ ಆದ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ಮೊದಲ ಇನಿಂಗ್ಸ್ನಲ್ಲಿ 291 ರನ್ಗಳ ಬೃಹತ್ ಹಿನ್ನಡೆಯ ಕಹಿಯುಣಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ತಂಡವು 584 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಕರ್ನಾಟಕವು 293 ರನ್ ಗಳಿಸಿ ನಾಲ್ಕನೇ ದಿನದಾಟದಲ್ಲಿ ಎಲ್ಲ ವಿಕೆಟ್ ಕಳೆದುಕೊಂಡಿತ್ತು. ಮಯಂಕ್ ಅಗರವಾಲ್ ಅವರು ಶತಕ ಗಳಿಸಿದ್ದರು. ಉಳಿದ ಅಗ್ರಕ್ರಮಾಂಕದ ಬ್ಯಾಟರ್ಗಳು ವೈಫಲ್ಯ ಅನುಭವಿಸಿದ್ದರು. ಎರಡನೇ ಇನಿಂಗ್ಸ್ ನಲ್ಲಿ ಕಮ್ರಾನ್ ಇಕ್ಬಾಲ್ (ಅಜೇಯ 160) ಮತ್ತು ಪ್ರಥಮದರ್ಜೆ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ದಾಖಲಿಸಿದ ಸಾಹಿಲ್ ಲೋತ್ರಾ (ಅಜೇಯ 101) ಅವರ ಆಟದಿಂದಾಗಿ ಶನಿವಾರ ಮಧ್ಯಾಹ್ನದವರೆಗೂ ಬೌಲರ್ಗಳು ಪರದಾಡಿದರು. ಇನಿಂಗ್ಸ್ ಡಿಕ್ಲೇರ್ ಮಾಡಿದ ತಕ್ಷಣ ಡ್ರಾ ಘೋಷಣೆಯಾಯಿತು. ಮುನ್ನಡೆಯ ಮೊತ್ತ 633ಕ್ಕೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.