ADVERTISEMENT

ಕ್ರಿಕೆಟ್ | ಪದಾರ್ಪಣೆ ಪಂದ್ಯದ ವೇಳೆ ಬೂಮ್ರಾಗೆ ಎಂಎಸ್ ಧೋನಿ ನೀಡಿದ ಸಲಹೆ ಏನು?

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 10:07 IST
Last Updated 24 ಫೆಬ್ರುವರಿ 2020, 10:07 IST
   

ಟೀಂ ಇಂಡಿಯಾದ ನಂ.1 ವೇಗದ ಬೌಲರ್‌ಜಸ್‌ಪ್ರೀತ್‌ ಬೂಮ್ರಾ 2016ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ ಐದು ಪಂದ್ಯಗಳ ಸರಣಿಯಲ್ಲಿ ಮೊದಲ ನಾಲ್ಕು ಪಂದ್ಯಗಳನ್ನು ಸೋತಿದ್ದ ಭಾರತ, ವೈಟ್‌ವಾಷ್‌ ತಪ್ಪಿಸಿಕೊಳ್ಳಲು ಕೊನೆಯ ಪಂದ್ಯದಲ್ಲಿ ಜಯ ಸಾಧಿಸಬೇಕಾದ ಅನಿವಾರ್ಯತೆಯಲ್ಲಿತ್ತು. ಪ್ರಮುಖ ವೇಗಿ ಭುವನೇಶ್ವರ್ ಗಾಯಗೊಂಡಿದ್ದರಿಂದ, ಅವರ ಸ್ಥಾನದಲ್ಲಿ ಆಡಿದ ಬೂಮ್ರಾ ಉತ್ತಮ ಸಾಮರ್ಥ್ಯ ತೋರಿದ್ದರು.

ತಮ್ಮ ಪಾಲಿನ ಹತ್ತೂ ಓವರ್‌ಗಳನ್ನು ಎಸೆದ ಅವರು 40 ರನ್‌ ನೀಡಿ ಪ್ರಮುಖ ಎರಡು ವಿಕೆಟ್‌ ಉರುಳಿಸಿದ್ದರು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ, ನಿಗದಿತ 50 ಓವರ್‌ಗಳಲ್ಲಿ 330 ರನ್‌ ಗಳಿಸಿತ್ತು. ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಬೂಮ್ರ ಹೊರತುಪಡಿಸಿ ಉಳಿದೆಲ್ಲ ಬೌಲರ್‌ಗಳು ದಂಡನೆಗೆ ಒಳಗಾಗಿದ್ದರು. ನಂತರ ಇನಿಂಗ್ಸ್‌ ಆರಂಭಿಸಿದಭಾರತ ಪರ ಮನೀಷ್‌ ಪಾಂಡೆ (104)ಶತಕಹಾಗೂ ಆರಂಭಿಕರಾದ ರೋಹಿತ್‌ ಶರ್ಮಾ (99), ಶಿಖರ್‌ ಧವನ್‌ (78) ಅರ್ಧಶತಕ ಗಳಿಸಿ ಗೆಲುವು ತಂದುಕೊಟ್ಟಿದ್ದರು.

ಈ ಪಂದ್ಯದ ನಂತರ ಬೂಮ್ರಾ, ಹಿಂತಿರುಗಿ ನೋಡಿದ್ದೇ ಇಲ್ಲ. ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಖಾಯಂ ಸದಸ್ಯರಾಗಿ ಉಳಿದರು. ಇದೀಗ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ 2ನೇ ಮತ್ತು ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆಪದಾರ್ಪಣೆಮಾಡಿದ ಸಂದರ್ಭದ ಬಗ್ಗೆ ಕ್ರೀಡಾ ತಾಣವೊಂದು ನಡೆಸಿರುವ ಸಂದರ್ಶನದಲ್ಲಿ ಮಾತನಾಡಿರುವ ಬೂಮ್ರಾ, ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ನೀಡಿದ ಸಲಹೆಯನ್ನು ಸ್ಮರಿಸಿದ್ದಾರೆ. ‘ಪದಾರ್ಪಣೆ ಪಂದ್ಯದ ವೇಳೆಯಾರೊಬ್ಬರೂ ನನ್ನ ಬಳಿ ಬಂದಿರಲಿಲ್ಲ ಮತ್ತು ಯಾವುದೇ ಸಲಹೆ ನೀಡಿರಲಿಲ್ಲ. ಆದರೆ, ಧೋನಿ ಮಾತ್ರ, ‘‘ನಿನ್ನಂತೆಯೇ ನೀನಿರು. ನಿನ್ನದೇ ರೀತಿಯಲ್ಲಿ ಆಟವನ್ನು ಖುಷಿಯಿಂದ ಅನುಭವಿಸು’’ ಎಂದಿದ್ದರು’ ಎಂದು ಹೇಳಿಕೊಂಡಿದ್ದಾರೆ.

ಇದುವರೆಗೆ 13 ಟೆಸ್ಟ್‌, 64 ಏಕದಿನ ಮತ್ತು 50 ಟಿ20‍ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಒಟ್ಟಾರೆ 226 ವಿಕೆಟ್‌ ಕಬಳಿಸಿದ್ದಾರೆ. 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತ ಪರ ಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಎಂಬ ಶ್ರೇಯವೂ ಅವರದ್ದು.

2019ರ ವಿಶ್ವಕಪ್‌ ಬಳಿಕ ಮಾಜಿ ನಾಯಕ ಧೋನಿ ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ. ಅವರ ಹೆಸರನ್ನು ಆಟಗಾರರ ಗುತ್ತಿಗೆ ಪಟ್ಟಿಯಿಂದಲೂ ಕೈಬಿಡಲಾಗಿದೆ. ಬೂಮ್ರಾ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದು, ಎರಡನೇ ಪಂದ್ಯ ಕ್ರೈಸ್ಟ್‌ ಚರ್ಚ್‌ನಲ್ಲಿ ಇದೇ 29ರಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.