ADVERTISEMENT

ಗೆಲುವಿನ ಹಾದಿಯಲ್ಲಿ ಕರ್ನಾಟಕ

ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌: ಲವನೀತ್‌ ಸಿಸೋಡಿಯಾ, ಸುಜಿತ್‌ ಗೌಡ ಅಜೇಯ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 19:47 IST
Last Updated 3 ಜನವರಿ 2019, 19:47 IST

ಮೈಸೂರು: ಲವನೀತ್‌ ಸಿಸೋಡಿಯಾ (74) ಮತ್ತು ಸುಜಿತ್‌ ಎನ್‌.ಗೌಡ (74) ಅವರ ಅಜೇಯ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ 23 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಗೆಲುವಿನತ್ತ ಹೆಜ್ಜೆಯಿಟ್ಟಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೆಲುವಿಗೆ 229 ರನ್‌ಗಳ ಗುರಿ ಪಡೆದ ಆತಿಥೇಯ ತಂಡ ಮೂರನೇ ದಿನವಾದ ಗುರುವಾರದ ಆಟದ ಅಂತ್ಯಕ್ಕೆ 58 ಓವರ್‌ಗಳಲ್ಲಿ 1 ವಿಕೆಟ್‌ಗೆ 164 ರನ್‌ ಗಳಿಸಿದೆ.

ಕರ್ನಾಟಕ ತಂಡ ನಾಯಕ ನಿಕಿನ್‌ ಜೋಸ್‌ (5) ಅವರನ್ನು ಬೇಗನೇ ಕಳೆದುಕೊಂಡಿತು. ಎರಡನೇ ವಿಕೆಟ್‌ಗೆ ಜತೆಯಾದ ಲವನೀತ್‌ ಮತ್ತು ಸುಜಿತ್‌ ತಂಡಕ್ಕೆ ಆಸರೆಯಾದರು. ಶುಕ್ರವಾರ ಅಂತಿಮ ದಿನವಾಗಿದ್ದು, ಕರ್ನಾಟಕದ ಗೆಲುವಿಗೆ 65 ರನ್‌ಗಳು ಬೇಕು.

ADVERTISEMENT

ಇದಕ್ಕೂ ಮುನ್ನ 5 ವಿಕೆಟ್‌ಗೆ 179 ರನ್‌ಗಳಿಂದ ಗುರುವಾರ ಆಟ ಮುಂದುವರಿಸಿದ ತಮಿಳುನಾಡು ತಂಡ ಎರಡನೇ ಇನಿಂಗ್ಸ್‌ನಲ್ಲಿ 259 ರನ್‌ಗಳಿಗೆ ಆಲೌಟಾಯಿತು.

61 ರನ್‌ಗಳಿಂದ ಆಟ ಮುಂದುವರಿಸಿದ ಎಸ್.ರಾಧಾಕೃಷ್ಣನ್ ಕೇವಲ ನಾಲ್ಕು ರನ್‌ಗಳಿಂದ ಶತಕ ವಂಚಿತರಾದರು. 96 ರನ್‌ ಗಳಿಸಿದ ಅವರು ಆದಿತ್ಯ ಸೋಮಣ್ಣಗೆ ವಿಕೆಟ್‌ ಒಪ್ಪಿಸಿದರು. ಕರ್ನಾಟಕದ ಪರ ಆದಿತ್ಯ ಸೋಮಣ್ಣ, ಕುಶಾಲ್‌ ವಾದ್ವಾನಿ ಮತ್ತು ಎಸ್‌.ಪುನೀತ್‌ ತಲಾ ಎರಡು ವಿಕೆಟ್‌ಗಳನ್ನು ಪಡೆದುಕೊಂಡರು.

ಸಂಕ್ಷಿಪ್ತ ಸ್ಕೋರ್‌: ತಮಿಳುನಾಡು ಮೊದಲ ಇನಿಂಗ್ಸ್‌: 42.2 ಓವರ್‌ಗಳಲ್ಲಿ 94 ಮತ್ತು ಎರಡನೇ ಇನಿಂಗ್ಸ್ 85.2 ಓವರ್‌ಗಳಲ್ಲಿ 259 (ಎಸ್‌.ರಾಧಾಕೃಷ್ಣನ್ 96, ವಿಶಾಲ್‌ ವೈದ್ಯ 32, ಆದಿತ್ಯ ಸೋಮಣ್ಣ 34ಕ್ಕೆ 2, ಕುಶಾಲ್‌ ವಾದ್ವಾನಿ 58ಕ್ಕೆ 2, ಎಸ್‌.ಪುನೀತ್‌ 64ಕ್ಕೆ 2) ಕರ್ನಾಟಕ ಮೊದಲ ಇನಿಂಗ್ಸ್ 66.2 ಓವರ್‌ಗಳಲ್ಲಿ 120 ಮತ್ತು ಎರಡನೇ ಇನಿಂಗ್ಸ್ 58 ಓವರ್‌ಗಳಲ್ಲಿ 1 ವಿಕೆಟ್‌ಗೆ 164 (ಲವನೀತ್‌ ಸಿಸೋಡಿಯಾ ಬ್ಯಾಟಿಂಗ್ 74, ಸುಜಿತ್‌ ಎನ್‌.ಗೌಡ ಬ್ಯಾಟಿಂಗ್ 74)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.