ADVERTISEMENT

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌: ಮಂಗಳೂರು ಯುನೈಟೆಡ್‌ಗೆ ಮೈಸೂರು ಸವಾಲು

ಬೆಂಗಳೂರಿನಲ್ಲಿ ಇಂದಿನಿಂದ ಪಂದ್ಯಗಳು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 21:42 IST
Last Updated 16 ಆಗಸ್ಟ್ 2022, 21:42 IST
ಮಯಂಕ್ ಅಗರವಾಲ್‌
ಮಯಂಕ್ ಅಗರವಾಲ್‌   

ಬೆಂಗಳೂರು: ಮಹಾರಾಜ ಟ್ರೋಫಿಕೆಎಸ್‌ಸಿಎ ಟಿ20 ಕ್ರಿಕೆಟ್‌ ಟೂರ್ನಿಯ ಎರಡನೇ ಲೆಗ್‌ ಪಂದ್ಯಗಳಿಗೆ ಉದ್ಯಾನನಗರಿ ಆತಿಥ್ಯ ವಹಿಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯುವ ಮೊದಲ ಹಣಾಹಣಿಯಲ್ಲಿ ಮಂಗಳೂರು ಯುನೈಟೆಡ್ ತಂಡವು ಮೈಸೂರು ವಾರಿಯರ್ಸ್ ವಿರುದ್ಧ ಕಣಕ್ಕಿಳಿಯಲಿದೆ.

ಎರಡನೇ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್‌ ಮತ್ತು ಬೆಂಗಳೂರು ಬ್ಲಾಸ್ಟರ್ಸ್‌ ಮುಖಾಮುಖಿಯಾಗಲಿವೆ.

ಮೈಸೂರಿನಲ್ಲಿ ನಡೆದ ಮೊದಲ ಲೆಗ್‌ ಪಂದ್ಯಗಳಲ್ಲಿ ಗುಲ್ಬರ್ಗ ಮಿಸ್ಟಿಕ್ಸ್‌ನ ರೋಹನ್ ಪಾಟೀಲ (ಔಟಾಗದೆ 112, ಮೈಸೂರು ವಾರಿಯರ್ಸ್ ಎದುರು) ಮತ್ತು ಬೆಂಗಳೂರು ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್‌ನ ಮಯಂಕ್ ಅಗರವಾಲ್‌ (ಔಟಾಗದೆ 102, ಶಿವಮೊಗ್ಗ ವಿರುದ್ಧ) ಶತಕ ಗಳಿಸಿ ಮಿಂಚಿದ್ದರು. ಇಲ್ಲಿಯೂ ಉತ್ತಮ ಸಾಮರ್ಥ್ಯ ತೋರುವ ಛಲದಲ್ಲಿದ್ದಾರೆ. ಶಿವಮೊಗ್ಗ ಸ್ಟ್ರೈಕರ್ಸ್‌ನ ಅವಿನಾಶ್ ಡಿ. ಪಂದ್ಯವೊಂದರಲ್ಲಿ ಐದು ವಿಕೆಟ್‌ ಗಳಿಸಿ ಬೌಲಿಂಗ್‌ನಲ್ಲಿ ಮಿನುಗಿದ್ದರು.

ADVERTISEMENT

ಸದ್ಯ ಮಯಂಕ್ ನಾಯಕತ್ವದ ಬೆಂಗಳೂರು, ಆರು ಪಂದ್ಯಗಳಿಂದ ಎಂಟು ಪಾಯಿಂಟ್ಸ್ ಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆರ್‌.ಸಮರ್ಥ ಸಾರ ಥ್ಯದ ಮಂಗಳೂರು ಯುನೈಟೆಡ್‌ ಕೂಡ ಎಂಟು ಪಾಯಿಂಟ್ಸ್ ಕಲೆಹಾಕಿದೆ. ಆದರೆ ನೆಟ್‌ ರನ್‌ರೇಟ್‌ನಲ್ಲಿ ಹಿಂದೆ ಇದೆ.

ಕರುಣ್‌ ನಾಯರ್ ಮುಂದಾಳತ್ವದ ಮೈಸೂರು ವಾರಿಯರ್ಸ್ ಆರು ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಮೈಸೂರಿನಲ್ಲಿ ಹಿನ್ನಡೆ ಅನುಭವಿಸಿರುವ ಗುಲ್ಬರ್ಗ, ಹುಬ್ಬಳ್ಳಿ ಟೈಗರ್ಸ್, ಮಂಗಳೂರು ಯುನೈಟೆಡ್‌ ತಂಡಗಳು ಇಲ್ಲಿ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿವೆ. ಆಗಸ್ಟ್ 26ರಂದು ಫೈನಲ್ ಸೇರಿ ದಂತೆ 16 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.

ಇಂದಿನ ಪಂದ್ಯಗಳು

* ಮಂಗಳೂರು ಯುನೈಟೆಡ್‌–ಮೈಸೂರು ವಾರಿಯರ್ಸ್:ಮಧ್ಯಾಹ್ನ 3ರಿಂದ
* ಶಿವಮೊಗ್ಗ ಸ್ಟ್ರೈಕರ್ಸ್–ಬೆಂಗಳೂರು ಬ್ಲಾಸ್ಟರ್ಸ್:ಸಂಜೆ 7ರಿಂದ
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌, ಫ್ಯಾನ್‌ ಕೋಡ್‌ ಆ್ಯಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.