
ಮೊಹಮ್ಮದ್ ಸಿರಾಜ್
(ಚಿತ್ರ ಕೃಪೆ: ಐಸಿಸಿ)
ಕೋಲ್ಕತ್ತ: ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (WTC) ವಿಜೇತ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡುವುದಾಗಿ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಸೈಕಲ್ನಲ್ಲಿ ಇಂಗ್ಲೆಂಡ್ ವಿರುದ್ಧ 2–2ರಿಂದ ಸರಣಿ ಸಮಬಲ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆಲ್ಲುವ ಮೂಲಕ ಪ್ರಸ್ತುತ ಭಾರತ ತಂಡ WTC ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1-1 ಡ್ರಾದೊಂದಿಗೆ ತಮ್ಮ WTC ಅಭಿಯಾನವನ್ನು ಆರಂಭಿಸಿದೆ.
ಶುಕ್ರವಾರದಿಂದ ಕೋಲ್ಕತ್ತದಲ್ಲಿ ಆರಂಭವಾಗಲಿರುವ ಪಂದ್ಯದ ಕುರಿತು ಜಿಯೋಹಾಟ್ಸ್ಟಾರ್ ಜೊತೆ ಮೊಹಮ್ಮದ್ ಸಿರಾಜ್ ಮಾತನಾಡಿದ್ದಾರೆ. ‘ದಕ್ಷಿಣ ಆಫ್ರಿಕಾ ಹಾಲಿ ಚಾಂಪಿಯನ್ ಆಗಿರುವುದರಿಂದ ಈ ಸರಣಿ ಡಬ್ಲ್ಯೂಟಿಸಿ ಸೈಕಲ್ನಲ್ಲಿ ನಿರ್ಣಾಯಕ ಎನಿಸಿದೆ. ದ.ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧ 1-1 ಸರಣಿ ಸಮಬಲ ಸಾಧಿಸಿದರೂ ಕೂಡ ತಂಡ ಬಲಿಷ್ಠವಾಗಿದೆ. ಇನ್ನೂ ನಮ್ಮ ತಂಡದ ಆಟಗಾರರು ಕೂಡ ಉತ್ತಮ ಲಯದಲ್ಲಿದ್ದಾರೆ. ಇಂಗ್ಲೆಂಡ್ ಸರಣಿ ಡ್ರಾ ಹಾಗೂ ವಿಂಡೀಸ್ ವಿರುದ್ಧ ಗೆಲುವು ಸಾಧಿಸಿರುವುದು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದು ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಸಿರಾಜ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಅವರು ಆ ಸರಣಿಯಲ್ಲಿ 23 ವಿಕೆಟ್ ಕಬಳಿಸಿದ್ದರು. ಇನ್ನೂ ವಿಂಡೀಸ್ ವಿರುದ್ಧವೂ 10 ವಿಕೆಟ್ ಪಡೆದು ತಮ್ಮ ಲಯವನ್ನು ಮುಂದುವರೆಸಿದ್ದಾರೆ.
‘ವೈಯಕ್ತಿಕವಾಗಿ ನಾನು ಉತ್ತಮ ಲಯದೊಂದಿಗೆ ಬೌಲಿಂಗ್ ಮಾಡುತ್ತಿದ್ದೇನೆ. ಮತ್ತು ಅದನ್ನೇ ಮುಂದುವರೆಸಲು ಯೋಜನೆ ರೂಪಿಸುತ್ತಿದ್ದೇನೆ. ಬಲಿಷ್ಠ ತಂಡಗಳನ್ನು ಎದುರಿಸುವಾಗ ನಮ್ಮ ದೌರ್ಬಲ್ಯಗಳೇನು ಎಂಬುದನ್ನು ತಿಳಿಯಲು ಸಹಕಾರಿಯಾಗುತ್ತದೆ. ದಕ್ಷಿಣ ಆಫ್ರಿಕಾ ವಿರುದ್ಧ ಆಡಲು ನಾನು ಉತ್ಸುಕನಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.