
ಧೋನಿ ಹಾಗೂ ಋತುರಾಜ್ ಗಾಯಕವಾಡ
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 2026 ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಈ ಬಾರಿಯ ಐಪಿಎಲ್ನಲ್ಲಿ ಕಣಕ್ಕಿಳಿಯುತ್ತಾರಾ, ಇಲ್ಲವಾ? ಎಂಬ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದ್ದು, ಅವರು ಮುಂಬರುವ ಆವೃತ್ತಿಯಲ್ಲಿ ಸಿಎಸ್ಕೆ ಪರ ಕಣಕ್ಕಿಳಿಯಲಿದ್ದಾರೆ. ಈ ನಡುವೆ ಧೋನಿ ಸೇರಿದಂತೆ ಸಿಎಸ್ಕೆ ಇತರೆ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಹಾಲಿ ನಾಯಕ ಋತುರಾಜ್ ಗಾಯಕವಾಡ್ ಮತ್ತು ತಂಡದ ಇತರೆ ಸದಸ್ಯರು ಭಾನುವಾರದಂದು ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಳೆದ ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯಲ್ಲಿ ಸ್ಥಾನ ಪಡೆದುಕೊಂಡಿತ್ತು. ಹಾಗಾಗಿ, ಈ ಬಾರಿ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದ್ದು, ಈಗಾಗಲೇ ಅಭ್ಯಾಸ ಆರಂಭಿಸಿದೆ.
ಭಾರತ ಕ್ರಿಕೆಟ್ ತಂಡದ ಪರ ಆಡುತ್ತಿರುವ ಕೆಲವು ಆಟಗಾರರು ಮತ್ತು ವಿದೇಶಿ ಆಟಗಾರರನ್ನು ಹೊರತುಪಡಿಸಿ, ಉಳಿದ ಬಹುತೇಕ ಆಟಗಾರರು ಅಭ್ಯಾಸದಲ್ಲಿ ಹಾಜರಾಗಿದ್ದಾರೆ. ಆಯುಷ್ ಮ್ಹಾತ್ರೆ, ಮುಖೇಶ್ ಚೌಧರಿ, ರಾಹುಲ್ ಚಾಹರ್, ಉರ್ವಿಲ್ ಪಟೇಲ್, ರಾಮಕೃಷ್ಣ ಘೋಷ್ ಮತ್ತು ಸರ್ಫರಾಜ್ ಖಾನ್ ಭಾನುವಾರ ನಡೆದ ಅಭ್ಯಾಸದಲ್ಲಿ ಉಪಸ್ಥಿತರಿದ್ದರು.
ಧೋನಿ ಮತ್ತು ಋತುರಾಜ್ ಗಾಯಕವಾಡ್ ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತಿರುವ ದೃಶ್ಯಗಳನ್ನು ಫ್ರಾಂಚೈಸಿ ಹಂಚಿಕೊಂಡಿದೆ. ಮಿನಿ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಕೂಡ ತಂಡದ ಅಭ್ಯಾಸದಲ್ಲಿ ಕಾಣಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.