ADVERTISEMENT

ರೈನಾ ದೇಶಿ ಕ್ರಿಕೆಟ್‌ನಲ್ಲಿ ಮಂಕಾಗಿದ್ದರಿಂದ ಸ್ಥಾನ ಪಡೆಯಲಿಲ್ಲ: ಪ್ರಸಾದ್

​ಪ್ರಜಾವಾಣಿ ವಾರ್ತೆ
Published 5 ಮೇ 2020, 19:45 IST
Last Updated 5 ಮೇ 2020, 19:45 IST
ಎಂ.ಎಸ್‌.ಕೆ. ಪ್ರಸಾದ್
ಎಂ.ಎಸ್‌.ಕೆ. ಪ್ರಸಾದ್   

ನವದೆಹಲಿ: ಉತ್ತರ ಪ್ರದೇಶದ ಸುರೇಶ್ ರೈನಾ ಅವರು ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ನಿರೀಕ್ಷಿತ ಸಾಧನೆ ಮಾಡದ ಕಾರಣ ಭಾರತ ಕ್ರಿಕೆಟ್ ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿಯ ನಿಕಟಪೂರ್ವ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್ ಹೇಳಿದ್ದಾರೆ.

‘1999ರಲ್ಲಿ ವಿವಿಎಸ್‌ ಲಕ್ಷ್ಮಣ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿತ್ತು. ಅವರು ಆಗ ಫಾರ್ಮ್ ಕೊರತೆ ಎದುರಿಸುತ್ತಿದ್ದರು. ಆದರ ನಂತರ ಅವರು ದೇಶಿ ಕ್ರಿಕೆಟ್‌ನ ಋತುವಿನಲ್ಲಿ 1400 ರನ್‌ಗಳನ್ನು ಗಳಿಸಿದರು. ಮತ್ತೆ ಭಾರತ ತಂಡಕ್ಕೆ ಮರಳಿದರು. ಅನುಭವಿ ಆಟಗಾರರಿಂದ ಆಯ್ಕೆ ಸಮಿತಿಯು ಈ ರೀತಿಯ ಸಾಧನೆಯನ್ನು ನಿರೀಕ್ಷಿಸುತ್ತದೆ. ಆದರೆ ರೈನಾ ಅವರು ಯಶಸ್ವಿಯಾಗಲಿಲ್ಲ’ ಎಂದು ಪ್ರಸಾದ್ ಹೇಳಿದ್ದಾರೆ.

2018–19ರ ರಣಜಿ ಋತುವಿನಲ್ಲಿ ರೈನಾ ಐದು ಪಂದ್ಯಗಳಲ್ಲಿ ಆಡಿ 243 ರನ್‌ ಗಳಿಸಿದ್ದರು. ಅದರಲ್ಲಿ ಎರಡು ಅರ್ಧಶತಕಗಳಿದ್ದವು. 2019ರ ಐಪಿಎಲ್‌ನಲ್ಲಿ ಚೆನ್ನೈ ತಂಡದ ಪರ ಅವರು 17 ಪಂದ್ಯಗಳಿಂದ 383 ರನ್‌ ಪೇರಿಸಿದ್ದರು. ಆದ್ದರಿಂದ ಅವರು ಹೋದ ವರ್ಷ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅರ್ಹತೆ ಗಿಟ್ಟಿಸಲಿಲ್ಲ.

ADVERTISEMENT

ಈಚೆಗೆ ಸ್ಪೋರ್ಟ್ಸ್‌ ಟಾಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈನಾ, ‘ಆಯ್ಕೆಗಾರರು ಹಿರಿಯ ಆಟಗಾರರ ಬಗ್ಗೆ ಜವಾಬ್ದಾರಿಯುತವಾಗಿ ಗಮನ ಹರಿಸಬೇಕು. ನನ್ನಲ್ಲಿ ಏನಾದರೂ ಕೊರತೆ ಇದ್ದರೆ ಹೇಳಿ. ಕಠಿಣ ಪರಿಶ್ರಮಪಟ್ಟು ತಿದ್ದಿಕೊಳ್ಳುತ್ತೇನೆ’ ಎಂದಿ್ದ್ದರು.

ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರಸಾದ್, ‘ರೈನಾ ಅವರು ದೇಶಿ ಕ್ರಿಕೆಟ್‌ನಲ್ಲಿಯೂ ಉತ್ತಮ ಸಾಮರ್ಥ್ಯ ತೋರಲಿಲ್ಲ. ಆದರೆ ಹಲವು ಯುವ ಆಟಗಾರರು ತಮ್ಮ ಉತ್ತಮ ಆಟದ ಮೂಲಕ ಗಮನ ಸೆಳೆದರು. ದೇಶಿ ಟೂರ್ನಿಗಳು ಮತ್ತು ಭಾರತ ಎ ತಂಡದಲ್ಲಿ ಉತ್ತಮ ಪ್ರತಿಭಾವಂತರು ಹೊರಹೊಮ್ಮಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.