ದುಬೈ: ನ್ಯೂಜಿಲೆಂಡ್ನ ಗ್ರೆಗ್ ಬಾರ್ಕ್ಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ತಡರಾತ್ರಿ (ಭಾರತೀಯ ಕಾಲಮಾನ) ನಡೆದ ಐಸಿಸಿಯ ವಾರ್ಷಿಕ ಸಭೆಯಲ್ಲಿ ಇಲೆಕ್ಟ್ರಾನಿಕ್ ಮತದಾನದ ಮೂಲಕ ಚುನಾವಣೆ ನಡೆಯಿತು. ಸಿಂಗಪುರದ ಇಮ್ರಾನ್ ಖ್ವಾಜಾ ಅವರನ್ನು ಬಾರ್ಕ್ಲೆ ಸುಲಭವಾಗಿ ಹಿಂದಿಕ್ಕಿದರು.
ಭಾರತದ ಶಶಾಂಕ್ ಮನೋಹರ್ ಅವರ ಅವಧಿ ಪೂರ್ಣಗೊಂಡ ನಂತರ ಖ್ವಾಜಾ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಒಟ್ಟು 16 ಸದಸ್ಯರ ನಿರ್ದೇಶಕ ಮಂಡಳಿಯ ಪೈಕಿ ಬಾರ್ಕ್ಲೆ ಅವರಿಗೆ 11 ಮತಗಳು ಲಭಿಸಿದವು. ಖ್ವಾಜಾ ಐದು ಮತ ಪಡೆದು ನಿರಾಸೆಗೊಂಡರು. 16 ಸದಸ್ಯ ಮಂಡಳಿಯ ಪೈಕಿ ಟೆಸ್ಟ್ ಆಡುವ 12 ರಾಷ್ಟ್ರಗಳು ಪೂರ್ಣಾವಧಿ ಸದಸ್ಯತ್ವ ಹೊಂದಿವೆ. ಮೂರು ಸಹ ರಾಷ್ಟ್ರಗಳಿದ್ದು ಪೆಪ್ಸಿಕೋದ ಇಂದಿರಾ ನೂಯಿ ಸ್ವತಂತ್ರ ಮಹಿಳಾ ನಿರ್ದೇಶಕಿಯಾಗಿದ್ದಾರೆ. ಐಸಿಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನು ಸಾವ್ನಿ ಸದಸ್ಯರಾಗಿದ್ದರೂ ಅವರಿಗೆ ಮತದಾನದ ಅವಕಾಶವಿಲ್ಲ.
ಕಳೆದ ವಾರ ನಡೆದ ಮೊದಲ ಸುತ್ತಿನ ಚುಣಾವಣೆಯಲ್ಲಿ ಬಾರ್ಕ್ಲಿ 10 ಮತ್ತು ಖ್ವಾಜಾ ಆರು ಮತಗಳನ್ನು ಗಳಿಸಿದ್ದರು. ನಿಯಮದ ಪ್ರಕಾರ ಮೂರನೇ ಒಂದರಷ್ಟು (11) ಬಹುಮತ ಇದ್ದರೆ ಮಾತ್ರ ಅಧ್ಯಕ್ಷರಾಗಲು ಸಾಧ್ಯ. ಹೀಗಾಗಿ ಎರಡನೇ ಸುತ್ತಿನ ಮತದಾನ ನಡೆದಿತ್ತು. ಈ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾದ ನಿರ್ಣಾಯಕ ಮತ ಪಡೆದು ಬಾರ್ಕ್ಲಿ ಈ ಹುದ್ದೆಗೇರಿದರು.
ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಗಳು ಬಾರ್ಕ್ಲಿ ಅವರಿಗೆ ಮತ ಹಾಕಲು ನಿರ್ಧರಿಸಿದ್ದವು. ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸುವ ಮೂಲಕ ಆರ್ಥಿಕ ಬೆಳವಣಿಗೆ ಮೇಲೆ ಈ ಮಂಡಳಿಗಳು ಕಣ್ಣಿಟ್ಟಿವೆ. ಇಂಥ ಸರಣಿಗಳಿಗೆ ಬಾರ್ಕ್ಲಿ ಬೆಂಬಲ ನೀಡುವ ಭರವಸೆಯೇ ಅವರಿಗೆ ಮತ ಹಾಕಲು ಕಾರಣ. ಸಿಂಗಪುರ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಖ್ವಾಜಾ ವೃತ್ತಿಯಲ್ಲಿ ವಕೀಲ. ಅವರು ಐಸಿಸಿ ಪ್ರಾಯೋಜಿತ ಟೂರ್ನಿಗಳ ಕಡೆಗೆ ಹೆಚ್ಚು ಗಮನ ನೀಡುವ ಮತ್ತು ಆ ಮೂಲಕ ಸದಸ್ಯ ಮಂಡಳಿಗಳ ಆರ್ಥಿಕತೆ ಹೆಚ್ಚಿಸುವ ಇರಾದೆ ಹೊಂದಿದ್ದರು. ಅವರನ್ನು ಪಾಕಿಸ್ತಾನ ಬೆಂಬಲಿಸಿತ್ತು.
ಬಾರ್ಕ್ಲಿ ಕೂಡ ವಕೀಲ. ಆಕ್ಲೆಂಡ್ ನಿವಾಸಿಯಾದ ಅವರು 2012ರಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ನ ನಿರ್ದೇಶಕರಾಗಿದ್ದರು. 2015ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅವರು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಪ್ರತಿಷ್ಠಿತ ಕಂಪನಿಗಳ ನಿರ್ದೇಶಕರಾಗಿದ್ದಾರೆ.
‘ಬಿಗ್ ತ್ರಿ’ ಜೊತೆ ಐಸಿಸಿ ಟೂರ್ನಿಗೂ ಮನ್ನಣೆ
ದ್ವಿಪಕ್ಷೀಯ ಕ್ರಿಕೆಟ್ ಟೂರ್ನಿಗಳು ನಡೆಯಬೇಕು ನಿಜ. ಅವುಗಳ ಜೊತೆಯಲ್ಲಿ ಐಸಿಸಿ ಆಯೋಜಿಸುವ ಟೂರ್ನಿಗಳಿಗೂ ಆದ್ಯತೆ ಸಿಗಬೇಕು ಎಂದು ಗ್ರೆಗ್ ಬಾರ್ಕ್ಲಿ ಅಭಿಪ್ರಾಯಪಟ್ಟಿದ್ದಾರೆ.
ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳನ್ನು ‘ಬಿಗ್ ತ್ರಿ’ ಎಂದು ಕರೆಯಲಾಗುತ್ತದೆ. ಐಸಿಸಿಯ ವರಮಾನದ ಸಿಂಹಪಾಲು ಈ ಮೂರು ಮಂಡಳಿಗಳಿಂದ ಬರುತ್ತದೆ. ಈ ಮಂಡಳಿಗಳು ಆಯೋಜಿಸುವ ಟೂರ್ನಿಗಳ ಮೇಲೆ ಬಾರ್ಕ್ಲಿ ಕಣ್ಣಿಟ್ಟಿದ್ದಾರೆ ಎಂದು ಚುಣಾವಣೆಗೆ ಮುನ್ನ ಪ್ರಚಾರವಾಗಿತ್ತು.
ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು ‘ಬಿಗ್ ತ್ರಿ’ಗಳ ದ್ವಿಪಕ್ಷೀಯ ಸರಣಿಗಳು ಮುಖ್ಯ ಎಂದು ನಾನು ಹೇಳಿದ್ದು ನಿಜ. ಕ್ರಿಕೆಟ್ ಬೆಳವಣಿಗೆಗೆ ಅದು ಕೂಡ ಬೇಕು ಎಂಬುದು ನನ್ನ ವಾದ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.