ADVERTISEMENT

ವಿಜಯ್ ಹಜಾರೆ ಟ್ರೋಫಿ ಏಕದಿನ: 2 ಪಂದ್ಯ ಆಡುವುದು ಕಡ್ಡಾಯ; ಬಿಸಿಸಿಐ ತಾಕೀತು

ಪಿಟಿಐ
Published 15 ಡಿಸೆಂಬರ್ 2025, 13:50 IST
Last Updated 15 ಡಿಸೆಂಬರ್ 2025, 13:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಇದೇ ತಿಂಗಳ 24ರಿಂದ ನಡೆಯಲಿರುವ ವಿಜಯ್‌ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕನಿಷ್ಠ ಎರಡು ಪಂದ್ಯಗಳಲ್ಲಾದರೂ ಆಡಬೇಕು ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ತಂಡದ ಹಾಲಿ ಆಟಗಾರರಿಗೆ ತಾಕೀತು ಮಾಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯ ಕೊನೆಯ ಪಂದ್ಯ ಅಹಮದಾಬಾದಿನಲ್ಲಿ (ಡಿ. 19ರಂದು) ನಡೆಯಲಿದೆ. ಭಾರತಕ್ಕೆ ಮುಂದಿನ ಏಕದಿನ ಸರಣಿ ನ್ಯೂಜಿಲೆಂಡ್ ವಿರುದ್ಧ ಜನವರಿ 11ರಿಂದ ನಿಗದಿಯಾಗಿದೆ. ಈ ಅವಧಿಯ ಮಧ್ಯೆ ಮೂರು ವಾರಗಳ ಬಿಡುವ ಇರುವ ಕಾರಣ ಸೀನಿಯರ್ ತಂಡದ ಆಟಗಾರರೆಲ್ಲಾ ದೇಶಿ ಕ್ರಿಕೆಟ್‌ ಆಡಬೇಕು ಎಂದು ಮಂಡಳಿ ಬಯಸಿದೆ.

ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಟೂರ್ನಿಗೆ ಲಭ್ಯರಿರುವುದಾಗಿ ಈಗಾಗಲೇ ಮಾಹಿತಿ ನೀಡಿದ್ದಾರೆ. ಶುಭಮನ್ ಗಿಲ್‌, ಜಸ್‌ಪ್ರೀತ್ ಬೂಮ್ರಾ, ಕೆ.ಎಲ್‌.ರಾಹುಲ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್‌ ಸೇರಿದಂತೆ ಇತರ ಆಟಗಾರರಿಗೂ ತಮ್ಮ ತಮ್ಮ ತಂಡಗಳಿಗೆ ಕನಿಷ್ಠ ಎರಡು ಪಂದ್ಯಗಳನ್ನಾದರೂ ಆಡಬೇಕೆಂದು ಸೂಚಿಸಲಾಗಿದೆ.

ADVERTISEMENT

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಹಿನ್ನಡೆ ಅನುಭವಿಸಿದ ನಂತರ ನಡೆದ ಪರಾಮರ್ಶೆ ಸಭೆಯಲ್ಲಿ ಕೈಗೊಳ್ಳಲಾದ ಶಿಫಾರಸುಗಳಲ್ಲಿ ಇದೂ ಒಂದಾಗಿದೆ. ದೇಶಿ ಕ್ರಿಕೆಟ್‌ ವಿವಿಧ ಮಾದರಿಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಲಾಗಿತ್ತು.

ಗಾಯದಿಂದ ಚೇತರಿಸಿಕೊಳ್ಳಲು ಶ್ರೇಯಸ್ ಅಯ್ಯರ್ ಅವರಿಗೆ ಸಮಯ ತಗಲುವ ಕಾರಣ ರಿಯಾಯಿತಿ ನೀಡಲಾಗಿದೆ.

ಬೂಮ್ರಾ ತವರಿಗೆ:

ಕುಟುಂಬದ ಆಪ್ತ ಸದಸ್ಯರೊಬ್ಬರು ಆಸ್ಪತ್ರೆಗೆ ದಾಖಲಾಗಿರುವ ಕಾರಣ ಜಸ್‌ಪ್ರೀತ್ ಬೂಮ್ರಾ ಅವರು ಮೂರನೇ ಪಂದ್ಯದ ನಂತರ ಧರ್ಮಶಾಲಾದಿಂದ ತವರು ಮುಂಬೈಗೆ ಹಿಂತಿರುಗಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಒಂದೇ ದಿನ ತಂಡ ಪ್ರಕಟ:

ಐಸಿಸಿಯು ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಲು ಗಡುವು ವಿಧಿಸಿದೆ. ಹೀಗಾಗಿ ಭಾರತ ಆ ಟೂರ್ನಿಗೆ ಮತ್ತು ಅದಕ್ಕೆ ಮುನ್ನ ನ್ಯೂಜಿಲೆಂಡ್ ವಿರುದ್ಧ ನಡೆಯುವ ಏಕದಿನ ಸರಣಿಗೆ ಒಂದೇ ದಿನ ತಂಡಗಳನ್ನು ಪ್ರಕಟಿಸಲಿದೆ. ಜನವರಿ ಮೊದಲ ವಾರ ತಂಡಗಳನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದೂ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.