ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತೀಯ ಆಟಗಾರರ ವಿರುದ್ಧ ಪ್ರೇಕ್ಷಕರ ಗುಂಪೊಂದರಿಂದ ಎದುರಾಗಿರುವ ಜನಾಂಗೀಯ ನಿಂದನೆಯನ್ನು ಖಂಡಿಸಿರುವ ಭಾರತದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್, ಆಸೀಸ್ ಅಭಿಮಾನಿಗಳು ಅಸಂಬದ್ಧವಾಗಿ ವರ್ತಿಸುತ್ತಿರುವುದು ಇದೇ ಮೊದಲಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಆಡುತ್ತಿರುವಾಗ ಮೈದಾನದಲ್ಲಿ ನನ್ನ ಬಗ್ಗೆ, ನನ್ನ ಧರ್ಮ, ವರ್ಣ ಹೀಗೆ ಅನೇಕ ವಿಷಯಗಳ ಬಗ್ಗೆ ಕೇಳಿದ್ದೇನೆ.ಆಸ್ಟ್ರೇಲಿಯಾ ಪ್ರೇಕ್ಷಕರು ಅಸಂಬದ್ಧವಾಗಿ ವರ್ತಿಸುತ್ತಿರುವುದು ಇದೇ ಮೊದಲಲ್ಲ. ನೀವು ಅವರನ್ನು ಹೇಗೆ ತಡೆಯುವಿರಿ? ಎಂದು ಪ್ರಶ್ನಿಸಿದರು.
2007-08ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಹಾಗೂ ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಆಂಡ್ರ್ಯೂ ಸೈಮಂಡ್ಸ್ ನಡುವೆ 'ಮಂಕಿಗೇಟ್' ಪ್ರಕರಣ ನಡೆದಿತ್ತು.
ಆಸೀಸ್ ಆಟಗಾರ ಆಂಡ್ರ್ಯೂ ಸೈಮಂಡ್ಸ್ ವಿರುದ್ಧ ಜನಾಂಗೀಯ ನಿಂದನೆ ಮಾಡಿರುವ ಆರೋಪವನ್ನು ಹರಭಜನ್ ಎದುರಿಸಿದ್ದರು. ಬಳಿಕ ನಡೆದ ವಿಚಾರಣೆಯಲ್ಲಿ ಭಜ್ಜಿ ಆರೋಪ ಮುಕ್ತಗೊಂಡು ನಿಷೇಧವನ್ನು ಹಿಂಪಡೆಯಲಾಗಿತ್ತು. ಅಂದು ಸಚಿನ್ ತೆಂಡೂಲ್ಕರ್ ನೀಡಿರುವ ಸಾಕ್ಷ್ಯವು ಭಜ್ಜಿ ಪಾಲಿಗೆ ನಿರ್ಣಾಯಕವೆನಿಸಿತ್ತು.
ಈಗ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರರಾದ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬೂಮ್ರಾ ವಿರುದ್ಧ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ದೂರನ್ನು ದಾಖಲಿಸಿದೆ.
ನಾಲ್ಕನೇ ದಿನದಾಟದಲ್ಲೂ ಮೊಹಮ್ಮದ್ ಸಿರಾಜ್ ವಿರುದ್ಧ ಪ್ರೇಕ್ಷಕರ ಗುಂಪೊಂದು ಜನಾಂಗೀಯ ನಿಂದನೆ ಮಾಡಿತ್ತು. ಬಳಿಕ ಆರು ಪ್ರೇಕ್ಷಕರನ್ನು ಗ್ಯಾಲರಿಯಿಂದ ಹೊರಗೆ ಕಳುಹಿಸಲಾಗಿತ್ತು.
ಇದಾದ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ಕ್ಷಮೆಯಾಚಿಸಿತ್ತು. ಐಸಿಸಿ ಕೂಡಾ ಘಟನೆಯನ್ನು ಖಂಡಿಸಿದ್ದು, ತನಿಖೆ ನಡೆಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.