ADVERTISEMENT

ಸದ್ಯ ಟೀಮ್ ಇಂಡಿಯಾ ಬಗ್ಗೆ ಯೋಚಿಸುತ್ತಿಲ್ಲ, ಐಪಿಎಲ್ ಮೇಲೆ ಗಮನ: ಹಾರ್ದಿಕ್

ಪಿಟಿಐ
Published 24 ಏಪ್ರಿಲ್ 2022, 10:17 IST
Last Updated 24 ಏಪ್ರಿಲ್ 2022, 10:17 IST
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ   

ನವಿ ಮುಂಬೈ: ಟೀಮ್ ಇಂಡಿಯಾಗೆ ಪುನರಾಗಮನ ಮಾಡುವ ಕುರಿತು ಸದ್ಯ ಯೋಚಿಸುತ್ತಿಲ್ಲ. ಐಪಿಎಲ್ ಮೇಲೆ ಗಮನ ಹರಿಸಿದ್ದೇನೆ ಎಂದು ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.

ಐಪಿಎಲ್ 2022ರಲ್ಲಿ ತಮ್ಮ ಫಿಟ್‌ನೆಸ್ ಸಾಬೀತು ಮಾಡಿರುವ ಪಾಂಡ್ಯ, ಅಮೋಘ ಬ್ಯಾಟಿಂಗ್ ಲಯ ಕಂಡುಕೊಂಡಿದ್ದಾರೆ.

ಹೀಗಾಗಿ ಪಾಂಡ್ಯ ಅವರನ್ನು ಮುಂಬರುವ ಟ್ವೆಂಟಿ-20 ವಿಶ್ವಕಪ್‌ಗಾಗಿಭಾರತ ತಂಡದಲ್ಲಿ ಸೇರ್ಪಡೆಗೊಳಿಸಬೇಕೆಂಬ ಕೂಗು ಜೋರಾಗಿ ಕೇಳಿಬರುತ್ತಿವೆ.

ಸತತ ಮೂರನೇ ಅರ್ಧಶತಕ ಗಳಿಸಿದ್ದ ಪಾಂಡ್ಯ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಮೂಲಕ ಟೈಟನ್ಸ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

'ಟೀಮ್ ಇಂಡಿಯಾ ಪುನರಾಗಮನದ ಬಗ್ಗೆ ಯೋಚಿಸುತ್ತಿಲ್ಲ. ನಾನು ನನ್ನ ಆಟದ ಮೇಲೆ ಮಾತ್ರ ಗಮನ ಹರಿಸುತ್ತಿದ್ದೇನೆ. ನಮ್ಮ ತಂಡವು ಉತ್ತಮ ಪ್ರದರ್ಶನ ನೀಡುತ್ತಿರುವುದು ಸಂತಸ ತಂದಿದೆ' ಎಂದು ಹೇಳಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ವಿಶ್ವಕಪ್‌ನಲ್ಲಿ ಆಡಿದ್ದ ಪಾಂಡ್ಯ, ಕಳಪೆ ಪ್ರದರ್ಶನ ನೀಡಿದ್ದರಲ್ಲದೆ ಫಿಟ್‌ನೆಸ್ ಸಮಸ್ಯೆಯಿಂದ ಬಳಲಿದ್ದರು.

'ನಿಸ್ಸಂಶಯವಾಗಿಯೂ ನಾಯಕತ್ವವು ಸಹಾಯ ಮಾಡಿದೆ. ನಾನು ಯಾವಾಗಲೂ ಜವಾಬ್ದಾರಿಗಳನ್ನು ವಹಿಸಲು ಇಷ್ಟಪಡುತ್ತೇನೆ. ಈ ನಿಟ್ಟಿನಲ್ಲಿ ಇಷ್ಟು ವರ್ಷಗಳಿಂದ ಆಡಿರುವುದು ಕ್ರಿಕೆಟ್ ಅನ್ನು ಹೆಚ್ಚು ಅರ್ಥಮಾಡಿಕೊಳ್ಳಲು ನೆರವಾಗಿದೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.