
ಹ್ಯಾರಿಸ್ ರವೂಫ್
ರಾವಲ್ಪಿಂಡಿ: 'ಯಾರೂ ನಮ್ಮನ್ನು ಕ್ಷಮಿಸುವುದಿಲ್ಲ. ರೊಬೊಟ್ಗಳಂತೆ ನಿರ್ವಹಣೆ ನೀಡಲು ನಿರೀಕ್ಷಿಸುತ್ತಾರೆ' ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಹ್ಯಾರಿಸ್ ರವೂಫ್ ವಿಷಾದ ವ್ಯಕ್ತಪಡಿಸಿದ್ದಾರೆ.
ರಾವಿಲ್ಪಿಂಡಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಆರು ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ 61 ರನ್ನಿಗೆ ನಾಲ್ಕು ವಿಕೆಟ್ ಗಳಿಸಿದ್ದ ರವೂಫ್, ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಇತ್ತೀಚೆಗೆ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧದ ಕಳಪೆ ಪ್ರದರ್ಶನಕ್ಕಾಗಿ ರವೂಫ್ ಭಾರಿ ಟೀಕೆಗೆ ಒಳಗಾಗಿದ್ದರು.
ಈ ಕುರಿತು ಪ್ರತಿಕ್ರಿಸಿಯಿದ ರವೂಫ್, 'ನಮಗೂ ಕೆಟ್ಟ ದಿನಗಳು ಬರಬಹುದು. ಆದರೆ ಯಾರೂ ನಮ್ಮನ್ನು ಕ್ಷಮಿಸುವುದಿಲ್ಲ. ನಮ್ಮಿಂದ ರೊಬೊಟ್ ರೀತಿಯಲ್ಲಿ ಪ್ರದರ್ಶನ ನೀಡಬೇಕು ಎಂದು ನಿರೀಕ್ಷೆ ಮಾಡುತ್ತಾರೆ' ಎಂದು ಹೇಳಿದ್ದಾರೆ.
'ಕೆಲವೊಂದು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಬಹುದು. ಆದರೆ ಅಲ್ಲಿಗೆ ಕೊನೆಯಾಗುವುದಿಲ್ಲ. ನಾವು ನಮ್ಮ ಕೌಶಲ್ಯದಲ್ಲಿ ನಂಬಿಕೆ ಇರಿಸುತ್ತೇವೆ. ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ. ಓರ್ವ ವೃತ್ತಿಪರ ಆಟಗಾರನಾಗಿ ಯಾವುದೇ ಬೌಲರ್ಗೆ ಕೆಟ್ಟ ದಿನಗಳು ಎದುರಾಗಬಹುದು' ಎಂದು ರವೂಫ್ ಪ್ರತಿಕ್ರಿಯಿಸಿದ್ದಾರೆ.
'ಯಾವ ಆಟಗಾರನ್ನು ಟೀಕೆಯನ್ನು ಇಷ್ಟಪಡುವುದಿಲ್ಲ. ನೀವು 10 ಉತ್ತಮ ಪಂದ್ಯಗಳನ್ನು ಆಡಿದ ಬಳಿಕ ಒಂದು ಕೆಟ್ಟ ಪ್ರದರ್ಶನವನ್ನು ನೀಡಬಹುದು. ಆದರೆ ಕೆಟ್ಟ ಪ್ರದರ್ಶನವನ್ನು ಮಾತ್ರ ಜನರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ' ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪಾಕಿಸ್ತಾನಕ್ಕಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಆಡಲು ಉತ್ಸುಕನಾಗಿರುವುದಾಗಿ ರವೂಫ್ ಹೇಳಿದ್ದಾರೆ.
ಸೆಪ್ಟೆಂಬರ್ನಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಪಂದ್ಯದ ವೇಳೆ ಆಟದ ಘನತೆಗೆ ಧಕ್ಕೆ ತಂದಿರುವುದಕ್ಕೆ ಹ್ಯಾರಿಸ್ ರವೂಫ್ ಮೇಲೆ ಐಸಿಸಿ ದಂಡ ವಿಧಿಸಿತ್ತು. ಟೂರ್ನಿಯ ವೇಳೆ ನಾಲ್ಕನೇ ಡಿಮೆರಿಟ್ ಪಾಯಿಂಟ್ ಪಡೆದ ಕಾರಣಕ್ಕೆ ರವೂಫ್ ಅವರಿಗೆ ಎರಡು ಪಂದ್ಯಗಳ ನಿಷೇಧ ಹೇರಲಾಗಿತ್ತು.
ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನ ಮಣಿಸಿದ್ದ ಭಾರತ ಚಾಂಪಿಯನ್ ಆಗಿತ್ತು. ರವೂಫ್ 3.4 ಓವರ್ಗಳಲ್ಲಿ 50 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.