ADVERTISEMENT

ರಾಜ್‌ಕೋಟ್ ಪಿಚ್ ಕಳಪೆ: ಕೆಎಸ್‌ಸಿಎ ದೂರು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 20:27 IST
Last Updated 8 ಡಿಸೆಂಬರ್ 2018, 20:27 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಬೆಂಗಳೂರು: ಒಂದೇ ದಿನ ಇಪ್ಪತ್ತು ವಿಕೆಟ್‌ಗಳನ್ನು ನುಂಗಿದ ರಾಜಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದ ಪಿಚ್‌ ಈಗ ಕೆಂಗಣ್ಣಿಗೆ ಗುರಿಯಾಗಿದೆ.

ಶನಿವಾರ ಇಲ್ಲಿ ಮುಕ್ತಾಯವಾದ ಸೌರಾಷ್ಟ್ರ ಎದುರಿನ ಪಂದ್ಯದಲ್ಲಿ ಕರ್ನಾಟಕ ತಂಡವು 87 ರನ್‌ಗಳಿಂದ ಸೋತಿತು. ವಿನಯಕುಮಾರ್ ಬಳಗವು ಶುಕ್ರವಾರ ಮೊದಲ ಇನಿಂಗ್ಸ್‌ನಲ್ಲಿ 100 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಶನಿವಾರ ಎರಡನೇ ಇನಿಂಗ್ಸ್‌ನಲ್ಲಿ ಆತಿಥೇಯ ತಂಡವು ಕೇವಲ 79 ರನ್‌ ಗಳಿಸಿ ಆಲೌಟ್ ಆಯಿತು. 179 ರನ್‌ಗಳ ಗುರಿ ಬೆನ್ನತ್ತಿದ್ದ ಕರ್ನಾಟಕ ತಂಡವು 91 ರನ್‌ಗಳಿಗೆ ಸರ್ವಪತನವಾಯಿತು. ಇದಕ್ಕೆ ಪಿಚ್‌ನ ಕಳಪೆ ಗುಣಮಟ್ಟವೇ ಕಾರಣ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ದೂರಿದೆ. ಈ ಕುರಿತು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ರಾವ್ ಅವರು ಬಿಸಿಸಿಐಗೆ ದೂರು ನೀಡಿದ್ದಾರೆ.

‘ನಿಯಮದ ಪ್ರಕಾರ ತಟಸ್ಥ ಪಿಚ್‌ ಕ್ಯುರೇಟರ್‌ ಸುಪರ್ದಿಗೆ ಈ ಪಿಚ್‌ ಅನ್ನು ನೀಡಿಲ್ಲವೆಂದು ತಿಳಿದುಬಂದಿದೆ. ತಮ್ಮದೇ ಸಂಸ್ಥೆಯ ಪಿಚ್‌ ಕ್ಯುರೇಟರ್‌ ನೇಮಕ ಮಾಡಿತ್ತು ಎಂಬ ಮಾತುಗಳು ಕೇಳಿಬಂದಿವೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು. ಕ್ರಿಕೆಟ್ ಆಟಕ್ಕೆ ಅಯೋಗ್ಯವಾದ ಪಿಚ್ ಇದಾಗಿತ್ತು. ಮೊದಲ ದಿನವೇ ಇದರ ಬಣ್ಣ ಬಯಲಾಗಿತ್ತು. ಅದಕ್ಕಾಗಿ ಅದೇ ದಿನ ಮಂಡಳಿಗೆ ಇ ಮೇಲ್ ಮಾಡಿದ್ದೆ. ಆತಿಥೇಯ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರಿಗೆ ದಂಡ ವಿಧಿಸಬೇಕು. ಪ್ರವಾಸಿ ತಂಡಕ್ಕೆ ಸಂಪೂರ್ಣ ಪಾಯಿಂಟ್ಸ್‌ ನೀಡಬೇಕು. ಹೀಗೆ ಮಾಡಿದರೆ ಬೇರೆ ಎಲ್ಲ ಸಂಸ್ಥೆಗಳು ಎಚ್ಚೆತ್ತುಕೊಳ್ಳುತ್ತವೆ. ಇಲ್ಲದಿದ್ದರೆ ಇಂತಹ ಕೆಟ್ಟ ಚಾಳಿ ಮುಂದುವರೆಯುತ್ತದೆ’ ಎಂದು ಸುಧಾಕರ್ ರಾವ್ ‘ಪ್ರಜಾವಾಣಿ’ಗೆ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.