ADVERTISEMENT

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವೇಳೆಯೂ ಆಟಗಾರನ ಸಂಪರ್ಕಿಸಿದ್ದ ಬುಕ್ಕಿ: ಗಂಗೂಲಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 9:28 IST
Last Updated 2 ಡಿಸೆಂಬರ್ 2019, 9:28 IST
   

ಮುಂಬೈ:ಭಾನುವಾರ ಮುಕ್ತಾಯವಾದಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ ಟ್ರೋಫಿ ವೇಳೆಯೂಆಟಗಾರರೊಬ್ಬರನ್ನು ಬುಕ್ಕಿ ಸಂಪರ್ಕಿಸಿರುವುದು ಬಿಸಿಸಿಐನ ಭ್ರಷ್ಟಾಚಾರ ತಡೆ ಘಟಕದ(ಎಸಿಯು) ಗಮನಕ್ಕೆ ಬಂದಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ.

ಬಿಸಿಸಿಐ ವಾರ್ಷಿಕ ಸಭೆ ಮುಗಿದ ಬಳಿಕ ಭಾನುವಾರ ಮಾತನಾಡಿದ ಗಂಗೂಲಿ,‘ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ನಡೆವೆಯೇ ಬುಕ್ಕಿಯೊಬ್ಬ ಆಟಗಾರನನ್ನು ಸಂಪರ್ಕಿಸಿರುವ ಬಗ್ಗೆ ತಿಳಿದುಬಂದಿದೆ. ಆಟಗಾರನ ಹೆಸರನ್ನು ಖಚಿತವಾಗಿ ಹೇಳಲಾರೆ. ಆದರೆ, ಪ್ರಚೋದನೆ ನೀಡಲಾಗಿದೆ ಮತ್ತು ಅದರ ಬಗ್ಗೆ ಆಟಗಾರ ಮಾಹಿತಿ ನೀಡಿದ್ದಾನೆ.ಬುಕ್ಕಿ ಸಂಪರ್ಕಿಸಿರುವುದು ಸಮಸ್ಯೆ ಅಲ್ಲ. ಆದರೆ, ಆ ಬಳಿಕ ಏನಾದರೂ ತಪ್ಪಾಯಿತೇ ಎಂಬುದು ಮುಖ್ಯ’ ಎಂದು ಹೇಳಿದ್ದಾರೆ.

ಬುಕ್ಕಿಗಳುತಮಿಳುನಾಡು ಪ್ರಿಮಿಯರ್‌ ಲೀಗ್‌ (ಟಿಎನ್‌ಪಿಎಲ್‌) ಹಾಗೂ ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌) ವೇಳೆಯೂ ಆಟಗಾರರನ್ನು ಸಂಪರ್ಕಿಸಿದ್ದರು. ಅವುಗಳ ವಿಚಾರಣೆಯೊಟ್ಟಿಗೆಯೇ ಈ ಪ್ರಕರಣದ ತನಿಖೆಯೂ ಮುಂದುವರಿದಿದೆ ಎಂದೂ ತಿಳಿಸಿದ್ದಾರೆ.

ADVERTISEMENT

‘ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ಎರಡೂ ರಾಜ್ಯಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಪ್ರಕರಣದಿಂದ ಅಂತ್ಯಕಾಣುವವರೆಗೆ ಕೆಪಿಎಲ್‌ ಅನ್ನು ನಿರ್ಬಂಧಿಸಲಾಗಿದೆ. ಇದೇ ರೀತಿ ಚೆನ್ನೈ, ಸೌರಾಷ್ಟ್ರ, ಮುಂಬೈನಲ್ಲಿಯೂ ಲೀಗ್‌ ನಡೆಯಬೇಕಿದೆ.ಸೌರಾಷ್ಟ್ರ, ಮುಂಬೈನಲ್ಲಿ ಲೀಗ್‌ ಸಂಬಂಧ ಯಾವುದೇ ದೂರುಗಳಿಲ್ಲ. ಆದರೆ, ಚೆನ್ನೈನಲ್ಲಿ ದೂರುಗಳಿವೆ. ಅವುಗಳನ್ನು ನಿಭಾಯಿಸಲಿದ್ದೇವೆ’ ಎಂದಿದ್ದಾರೆ.

ಇಂತಹ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಲು ಬಿಸಿಸಿಐನಎಸಿಯು ಅನ್ನು ಬಲಪಡಿಸುವುದಾಗಿಯೂ ಹೇಳಿದ್ದಾರೆ. ‘ಇಂತಹ ಪ್ರಕರಣಗಳನ್ನು ಯಾರೂ ಬಯಸುವುದಿಲ್ಲ. ಇವು ಯಾರೊಬ್ಬರಿಗೂ ನೆರವಾಗುವುದಿಲ್ಲ. ಕೆಪಿಎಲ್ ಅನ್ನು ಸದ್ಯ ತಡೆ ಹಿಡಿಯಲಾಗಿದೆ. ಟಿಎನ್‌ಪಿಎಲ್‌ನಲ್ಲಿ ಎರಡು ಪ್ರಾಂಚೈಸ್‌ಗಳನ್ನು ಅಮಾನತು ಮಾಡಲಾಗಿದೆ. ಎಸಿಯು ಅನ್ನು ಮತ್ತಷ್ಟು ಬಲಪಡಿಸಬೇಕಿದ್ದು, ಅದು ಪ್ರಯೋಜನವಾಗದಿದ್ದರೆ, ನಾವು ಬೇರೆ ದಾರಿ ಯೋಚಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.