ADVERTISEMENT

PV Web Exclusive: ‘ಸಮರ್ಥ‘ ನಾಯಕತ್ವದ ಹಾದಿ ಸುಲಭವಲ್ಲ

ಗಿರೀಶದೊಡ್ಡಮನಿ
Published 2 ಫೆಬ್ರುವರಿ 2021, 14:54 IST
Last Updated 2 ಫೆಬ್ರುವರಿ 2021, 14:54 IST
ಆರ್. ಸಮರ್ಥ್
ಆರ್. ಸಮರ್ಥ್   

ಏಕದಿನ ಕ್ರಿಕೆಟ್‌ನ ರಣಜಿ ಟೂರ್ನಿಯೆಂದೇ ಕರೆಸಿಕೊಳ್ಳುವ ವಿಜಯ್ ಹಜಾರೆ ಟ್ರೋಫಿ ಈ ತಿಂಗಳು ನಡೆಯುವುದು ಖಚಿತವಾಗಿದೆ. 2020–21ನೇ ಸಾಲಿನಲ್ಲಿ ದೀರ್ಘ ಮಾದರಿಯ ರಣಜಿ ಟ್ರೋಫಿ ಟೂರ್ನಿಯನ್ನು ಕೈಬಿಟ್ಟಿರುವುದರಿಂದ ಸೀಮಿತ ಓವರ್‌ಗಳ ಮಾದರಿಯ ಕಿರೀಟಕ್ಕೆ ಈಗ ಚಿನ್ದದ ಮೆರುಗು ಬಂದಿದೆ. ಅದಕ್ಕಾಗಿ ದೇಶದ ಎಲ್ಲ ತಂಡಗಳೂ ಅಭ್ಯಾಸದಂಗಳಕ್ಕೆ ಇಳಿದಿವೆ.

ಇತಿಹಾಸದಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಕರ್ನಾಟಕ ತಂಡವೂ ಈಗ ಕಣಕ್ಕಿಳಿಯಲು ಸಜ್ಜಾಗಿದೆ. ತಣ್ಣನೆಯ ಸ್ವಭಾವದ ಬ್ಯಾಟ್ಸ್‌ಮನ್ ರವಿಕುಮಾರ್ ಸಮರ್ಥ್ ಅವರಿಗೆ ನಾಯಕತ್ವದ ಹೊಣೆ ನೀಡಿದೆ. ಮನೀಷ್ ಪಾಂಡೆ ಅನುಪಸ್ಥಿತಿಯಲ್ಲಿ ಅವರು ಈ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. 28 ವರ್ಷದ ಬಲಗೈ ಬ್ಯಾಟ್ಸ್‌ಮನ್ ಸಮರ್ಥ್‌ಗೆ ಆಟದ ಅನುಭವ ಸಾಕಷ್ಟಿದೆ. ಆದರೆ, ನಾಯಕತ್ವದ ಅವಕಾಶ ಸಿಕ್ಕಿರುವುದು ಇದೇ ಮೊದಲು. ಆದ್ದರಿಂದ ಈಗ ಅವರ ಮುಂದೆ ಕಠಿಣ ಹಾದಿ ಇದೆ. ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಪಾಂಡೆ ಅವರಿಲ್ಲದ ಬ್ಯಾಟಿಂಗ್ ಪಡೆ. ಅಭಿಮನ್ಯು ಮಿಥುನ್, ರೋನಿತ್ ಮೋರೆ ಬಿಟ್ಟರೆ ಅಷ್ಟೇನೂ ಅನುಭವಿಗಳಲ್ಲದ ಮಧ್ಯಮವೇಗಿಗಳು ಇರುವ ತಂಡವನ್ನು ಮುನ್ನಡೆಸಬೇಕಿದೆ. ಬ್ಯಾಟಿಂಗ್‌ ಪಡೆಯಲ್ಲಿಯೂ ಅಸ್ಥಿರತೆ ಇದೆ. ಕರುಣ್ ನಾಯರ್ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ಮಿಂಚಿದ್ದ ದೇವದತ್ತ ಪಡಿಕ್ಕಲ್ ಈಚೆಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಡಿರಲಿಲ್ಲ. ಇದ್ದುದರಲ್ಲಿ ಅನಿರುದ್ಧ ಜೋಶಿ ಚೆನ್ನಾಗಿ ಆಡಿದ್ದರು. ರೋನಿತ್ ಮೋರೆ, ಬಿ.ಆರ್. ಶರತ್ ಕೂಡ ಲಯದಲ್ಲಿಲ್ಲ.

ಅಲ್ಲದೇ ಈಚೆಗೆ ಸೈಯದ್ ಮುಷ್ತಾಕ್ ಅಲಿ ಟಿ–20 ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋತಿರುವ ಕಹಿ ಕೂಡ ಇದೆ. ಆ ಟೂರ್ನಿಯಲ್ಲಿ ನಾಯಕತ್ವ ವಹಿಸಿದ್ದ ತಂಡವನ್ನು ಮುನ್ನಡೆಸಿದ್ದ ಕರುಣ್ ಅವರನ್ನು ನಾಯಕ ಪಟ್ಟದಿಂದ ಕೆಳಗಿಳಿಸಿ ಸಮರ್ಥ್‌ ಅವರನ್ನು ಆಯ್ಕೆ ಮಾಡಲಾಗಿದೆ. ಯುವ ಆಟಗಾರರಾದ ದೇವದತ್ತ, ಕೆ.ಎಲ್. ಶ್ರೀಜಿತ್, ಪ್ರಸಿದ್ಧಕೃಷ್ಣ, ಎಂ.ಬಿ. ದರ್ಶನ್ ಅವರ ಪ್ರತಿಭೆಯನ್ನು ಹೇಗೆ ಬಳಸಿಕೊಳ್ಳುತ್ತಾರೆನ್ನುವುದು ಈಗಿರುವ ಕುತೂಹಲ.

ADVERTISEMENT

ಇದೆಲ್ಲದರ ಜೊತೆಗೆ ತಮ್ಮ ಬ್ಯಾಟಿಂಗ್‌ ಲಯಕ್ಕೂ ಮರಳುವ ಒತ್ತಡ ಅವರ ಮೇಲೆ ಇದೆ. ಸಮರ್ಥ್ 2013ರಲ್ಲಿ ವಿನಯಕುಮಾರ್ ನಾಯಕತ್ವದ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಮುಂಬೈ ಎದುರಿನ ಆ ರಣಜಿ ಪಂದ್ಯದಲ್ಲಿ ಸಮರ್ಥ್‌ ಜೊತೆಗೆ ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಕೂಡ ರಾಜ್ಯ ತಂಡಕ್ಕೆ ಕಾಲಿಟ್ಟಿದ್ದರು. ಸಮರ್ಥ್, ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕೆ.ಎಲ್. ರಾಹುಲ್, ನಂತರ ಮಯಂಕ್ ಅಗರವಾಲ್ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದರು. ತಮ್ಮ ತಾಳ್ಮೆಯ ಮತ್ತು ಕೌಶಲಭರಿತ ಬ್ಯಾಟಿಂಗ್ ಮೂಲಕ ತಂಡದಲ್ಲಿ ಸ್ಥಾನ ಗಟ್ಟಿಮಾಡಿಕೊಂಡಿದ್ದರು. ತಂಡಕ್ಕೆ ಹಲವು ಬಾರಿ ಉತ್ತಮ ಆರಂಭ ಒದಗಿಸಿಕೊಟ್ಟ ಶ್ರೇಯ ಅವರದ್ದು. ತಂಡದ ಡಬಲ್ ಟ್ರಿಪಲ್ (ಸತತ ಎರಡು ವರ್ಷ ದೇಶಿ ಕ್ರಿಕೆಟ್‌ನ ಮೂರು ಪ್ರಶಸ್ತಿಗಳನ್ನು ಜಯಿಸಿದ, ಸಾಧನೆಯಲ್ಲಿ ಸಮರ್ಥ್ ಕಾಣಿಕೆಯೂ ಗಮನಾರ್ಹವಾಗಿದೆ. ಒಟ್ಟು 66 ರಣಜಿ ಪಂದ್ಯಗಳಿಂದ ಅವರು 4,171 ರನ್‌ಗಳನ್ನು ಗಳಿಸಿದ್ದಾರೆ. 10 ಶತಕ ಮತ್ತು 21 ಅರ್ಧಶತಕಗಳು ಅವರ ಖಾತೆಯಲ್ಲಿವೆ.

ಲಿಸ್ಟ್ ಎ ವಿಭಾಗದಲ್ಲಿಯೂ 32 ಪಂದ್ಯಗಳನ್ನು ಆಡಿದ್ದಾರೆ. ನಾಲ್ಕು ಶತಕಗಳೂ ಅವರ ಹೆಸರಲ್ಲಿವೆ. ಆದರೆ ಸಮರ್ಥ್ ಅವರು ಕಳೆದ ಎರಡು ವರ್ಷಗಳಿಂದ ದೇಶಿ ಕ್ರಿಕೆಟ್‌ನ ಸೀಮಿತ ಓವರ್‌ಗಳ ಟೂರ್ನಿಯಲ್ಲಿ ಆಡಿಲ್ಲ. ಕೆಎಸ್‌ಸಿಎ ಈಚೆಗೆ ಸಂಘಟಿಸಿದ್ದ ವೈ.ಎಸ್. ರಾಮಯ್ಯ ಟಿ20 ಮತ್ತು ಏಕದಿನ ಟೂರ್ನಿಗಳಲ್ಲಿ ತಮ್ಮ ಕ್ಲಬ್ ತಂಡ ಪ್ರತಿನಿಧಿಸಿದ್ದರು. ಆದರೆ ಅಂತರರಾಜ್ಯ ಟೂರ್ನಿಯಲ್ಲಿ ಆಡಿಲ್ಲ. ಹೋದ ವರ್ಷ ಕೋಲ್ಕತ್ತದಲ್ಲಿ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಆಡಿದ್ದರು. ಲಿಸ್ಟ್‌ ಎ ಪಂದ್ಯದಲ್ಲಿ ಆಡಿದ್ದು 2018ರಲ್ಲಿ ಕೊನೆಯದು. ಆಗ ದೇವಧರ್ ಟ್ರೋಫಿ ಟೂರ್ನಿಯಲ್ಲಿ ಭಾರತ ಸಿ ತಂಡವನ್ನು ಪ್ರತಿನಿಧಿಸಿದ್ದರು. 2019ರಲ್ಲಿ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಡಿದ್ದರು. ಈಚೆಗೆ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿರಲಿಲ್ಲ. ಇದೀಗ ಏಕದಿನ ಮಾದರಿಗೆ ಅವರಿಗೆ ಮಣೆ ಹಾಕಲಾಗಿದೆ.

ಆರ್. ಸಮರ್ಥ್

ಕೊರೊನಾ ಕಾಲದ ಮಾರ್ಗಸೂಚಿಯ ಸವಾಲು, ತಂಡದೊಳಗಿನ ‘ಒತ್ತಡ’ಗಳನ್ನು ನಿಭಾಯಿಸಿಕೊಂಡು ಕರ್ನಾಟಕವನ್ನು ಜಯದ ಹಾದಿಗೆ ತರುವ ಗುರುತರ ಹೊಣೆ ಸಮರ್ಥ್ ಮೇಲೆ ಇದೆ. ಎಂಟು ವರ್ಷಗಳಿಂದ ತಂಡದಲ್ಲಿರುವ ಸಮರ್ಥ್ ತಮ್ಮ ಸ್ನೇಹ ಸ್ವಭಾವದಿಂದ ಎಲ್ಲರಿಗೂ ಹತ್ತಿರವಿದ್ದಾರೆ. ಸದಾ ಚಟಾಕಿ ಹಾರಿಸುತ್ತ, ಸಹ ಆಟಗಾರರನ್ನು ನಗಿಸುತ್ತ, ತಾನೂ ನಗುತ್ತಿರುವ ಹುಡುಗ.

‘ಹೋದ ವರ್ಷ ಗಾಯದ ಸಮಸ್ಯೆ ಇತ್ತು. ಈಗ ಚೇತರಿಸಿಕೊಂಡಿದ್ದೇನೆ. ಸಂಫೂರ್ಣ ಫಿಟ್ ಆಗಿದ್ದೇನೆ. ರಾಜ್ಯ ತಂಡದ ನಾಯಕನಾಗುವುದೆಂದರೆ ದೊಡ್ಡ ಗೌರವದ ಸಂಗತಿ. ಉತ್ತಮವಾಗಿ ನಿಭಾಯಿಸುತ್ಥೆನೆ’ ಎಂದು ಸಮರ್ಥ್ ಸಂತಸ ಹಂಚಿಕೊಂಡಿದ್ದಾರೆ.

‘ಸಮರ್ಥ್ ಕ್ರಿಕೆಟಿಗನಾಗುವ ಮುನ್ನ ಒಳ್ಳೆಯ ಸ್ಪ್ರಿಂಟರ್ ಆಗಿದ್ದರು. ಟೆನಿಸ್‌ ಕೂಡ ಚೆನ್ನಾಗಿ ಆಡುತ್ತಿದ್ದರು’ ಎಂದು ಹಿಂದೊಮ್ಮೆ ಅವರ ತಂದೆ, ಬ್ಯಾಂಕ್ ಉದ್ಯೋಗಿ ರವಿಕುಮಾರ್ ಅವರು ಹೇಳಿದ್ದರು. ಆದರೆ ಸಮರ್ಥ್ ಕ್ರಿಕೆಟ್‌ನತ್ತ ಹೊರಳಿದ್ದು ಕರ್ನಾಟಕ ತಂಡಕ್ಕೆ ಒಳ್ಳೆಯದಾಯಿತು. ಏಳು–ಬೀಳುಗಳ ನಡುವೆಯೂ ಬ್ಯಾಟ್ ಮೂಲಕ ಉತ್ತಮ ಕಾಣಿಕೆಗಳನ್ನು ಕೊಟ್ಟಿರುವ ಸಮರ್ಥ್‌ ಗೆ ಈಗ ತಮ್ಮ ನಾಯಕತ್ವದ ಗುಣವನ್ನು ಸಾಬೀತುಪಡಿಸುವ ಸವಾಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.