ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮೂರು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಈ ನಡುವೆ ಬ್ಯಾಟಿಂಗ್ ವೇಳೆ ಇದ್ದಕ್ಕಿದ್ದಂತೆ ಕ್ರೀಸ್ ಬಿಟ್ಟು ಪೆವಿಲಿಯನ್ನತ್ತ ಹೆಜ್ಜೆ ಹಾಕಿರುವ ರಾಜಸ್ಥಾನ್ ರಾಯಲ್ಸ್ ತಂಡದ ರವಿಚಂದ್ರನ್ ಅಶ್ವಿನ್ ಸುದ್ದಿಯಲ್ಲಿದ್ದಾರೆ.
ತಂಡದ ರಣನೀತಿಯ ಭಾಗವಾಗಿ 'ರಿಟೈರ್ಡ್ ಔಟ್' ಆಗಲು ಅಶ್ವಿನ್ ನಿರ್ಧರಿಸಿದ್ದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ರಿಟೈರ್ಡ್ ಔಟ್ ಆದ ಮೊದಲ ಬ್ಯಾಟರ್ ಎನಿಸಿದ್ದಾರೆ.
ಐದನೇ ವಿಕೆಟ್ಗೆ ಶಿಮ್ರಾನ್ ಹೆಟ್ಮೆಯರ್ ಜೊತೆಗೆ ಅಶ್ವಿನ್ 68 ರನ್ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಆದರೆ 19ನೇ ಓವರ್ನ ಎರಡನೇ ಎಸೆತದ ಬಳಿಕ ಅಶ್ವಿನ್, ರಿಟೈರ್ಡ್ ಔಟ್ ಆದರು. ತಮಗಿಂತಲೂ ವೇಗವಾಗಿ ಬ್ಯಾಟ್ ಬೀಸುವ ರಿಯಾನ್ ಪರಾಗ್ಗೆ ಅವಕಾಶ ಮಾಡಿಕೊಡಲು ಅಶ್ವಿನ್ ತಮ್ಮ ವಿಕೆಟ್ ಬಿಟ್ಟುಕೊಡಲು ನಿರ್ಧರಿಸಿದ್ದರು.
ಅಶ್ವಿನ್ ಈ ನಡೆಯು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಭವಿಷ್ಯದಲ್ಲಿ ಹೆಚ್ಚಿನ ತಂಡಗಳು ಇದೇ ನೀತಿಯನ್ನು ಅನುಸರಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾಯಕ ಸಂಜು ಸ್ಯಾಮ್ಸನ್, ಇದೊಂದು ತಂಡದ ಒಮ್ಮತದ ನಿರ್ಧಾರವಾಗಿತ್ತು. ಈ ಹಿಂದೆಯೇ ಇಂತಹ ಪರಿಸ್ಥಿತಿ ಎದುರಾದರೆ ಅದನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಚರ್ಚಿಸಲಾಗಿತ್ತು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.