ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ
ನವದೆಹಲಿ: ಆಯ್ಕೆದಾರರ ನೇಮಕಾತಿಯಲ್ಲಿ, ವಿಶೇಷವಾಗಿ ದೇಶೀಯ ಮಟ್ಟದಲ್ಲಿ ಪ್ರಮುಖ ಬದಲಾವಣೆಗಳು ಆಗಬೇಕಿದೆ ಎಂದು ಭಾರತೀಯ ಕ್ರಿಕೆಟಿಗ ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟಿದ್ದಾರೆ..
ಪ್ರಥಮ ದರ್ಜೆ ಕ್ರಿಕೆಟ್ನಿಂದ ನಿವೃತ್ತರಾವರು ಮಾತ್ರ ತಂಡಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಏಕೆಂದರೆ ಅವರು ಬದಲಾಗುತ್ತಿರುವ ಕ್ರಿಕೆಟ್ ಸ್ವರೂಪಕ್ಕೆ ತಕ್ಕಂತೆ ಆಟಗಾರರನ್ನು ಆಯ್ಕೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಹೇಳಿದ್ದಾರೆ.
ಪ್ರಸ್ತುತ, ಕನಿಷ್ಠ 10 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ಯಾವುದೇ ಕ್ರಿಕೆಟಿಗ ರಾಜ್ಯ ತಂಡದ ಆಯ್ಕೆದಾರರಾಗಲು ಅರ್ಜಿ ಸಲ್ಲಿಸಬಹುದು. ಹಾಗೂ ಕನಿಷ್ಠ 5 ವರ್ಷಗಳ ಹಿಂದೆ ತಂಡದಿಂದ ನಿವೃತ್ತರಾದವರು ಎಂಬ ನಿಯಮವಿದೆ.
ಈ ನಿಯಮದ ಕುರಿತು ಮಾತನಾಡಿದ ಅಜಿಂಕ್ಯ ರಹಾನೆ, ನಿಗದಿಪಡಿಸಿದ ದಿನಾಂಕಗಳನ್ನು ಮೀರಿ ಆಯ್ಕೆದಾರರ ಮನಸ್ಥಿತಿ ಮತ್ತು ವಿಧಾನವು ಕ್ರಿಕೆಟ್ನ ಪ್ರಸ್ತುತ ವೇಗಕ್ಕೆ ಹೊಂದಿಕೆಯಾಗುವುದು ಮುಖ್ಯ ಎಂದರು.
ತಮ್ಮ ಮಾಜಿ ಸಹ ಆಟಗಾರ ಚೇತೇಶ್ವರ ಪೂಜಾರ ಜೊತೆ ನಡೆಸಿದ ಸಂವಾದದಲ್ಲಿ ಮಾತನಾಡಿದ ರಹಾನೆ, ‘ಆಟಗಾರರು ಆಯ್ಕೆದಾರರಿಗೆ ಹೆದರಬಾರದು. ದೇಶೀಯ ಕ್ರಿಕೆಟ್ನ ಆಯ್ಕೆದಾರರ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ಉನ್ನತ ಕ್ರಿಕೆಟ್ನಿಂದ ನಿವೃತ್ತರಾದವರು ಇರಬೇಕು. ಐದು-ಆರು ವರ್ಷ, ಏಳು-ಎಂಟು ವರ್ಷಗಳ ಹಿಂದೆ ನಿವೃತ್ತರಾದವರು ಇದ್ದರು ಆಗಬಹುದು‘ ಎಂದು ಅವರು ಹೇಳಿದರು.
ಕ್ರಿಕೆಟ್ ಸ್ವರೂಪ ಬದಲಾದಂತೆ ಆಯ್ಕೆದಾರರ ಮನಸ್ಥಿತಿ ಅದಕ್ಕೆ ಹೊಂದಿಕೊಳ್ಳುವುದು ಮುಖ್ಯ. ಬದಲಾವಣೆಗೆ ಅನುಗುಣವಾಗಿರುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದರು.
ಕಳೆದ 20-30 ವರ್ಷಗಳ ಹಿಂದೆ ಕ್ರಿಕೆಟ್ ಹೇಗಿತ್ತು ಎಂಬುದರ ಆಧಾರದ ಮೇಲೆ ನಾವು ನಿರ್ಧಾರಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ. ಟಿ20 ಮತ್ತು ಐಪಿಎಲ್ನಂತಹ ಸ್ವರೂಪಗಳು ಬಂದಮೇಲೆ ಆಧುನಿಕ ಕ್ರಿಕೆಟ್ ಆಟಗಾರರ ಶೈಲಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು. ಪೂಜಾರ ಕೂಡ ರಹಾನೆ ಅವರ ಹೇಳಿಕೆಗೆ ಸಹಮತ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.