ನವದೆಹಲಿ: ರಾಹುಲ್ ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖಸ್ಥರಾಗಿ ಮರುನೇಮಕ ಬಯಸಿ ಅರ್ಜಿ ಸಲ್ಲಿಸಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಹುದ್ದೆಯ ನೇಮಕಕ್ಕಾಗಿ ಈಚೆಗೆ ಅರ್ಜಿ ಆಹ್ವಾನಿಸಿತ್ತು. ಪ್ರಸ್ತುತ ಮುಖ್ಯಸ್ಥರಾಗಿರುವ ರಾಹುಲ್ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೆ ಅವರನ್ನು ಬಿಟ್ಟು ಬೇರೆ ಯಾರೂ ಅರ್ಜಿ ಹಾಕಿಲ್ಲ.
ಆದ್ದರಿಂದ ಮಂಡಳಿಯು ಅರ್ಜಿ ಸ್ವೀಕಾರದ ಅವಧಿಯನ್ನು ವಿಸ್ತರಿಸಿದೆ. ಅಗಸ್ಟ್ 15ಕ್ಕೆ ಕೊನೆಯ ದಿನವಿತ್ತು. ಈಗ ಕೆಲವು ದಿನಗಳ ವರೆಗೆ ಅವಕಾಶ ನೀಡಿದೆ.
‘ರಾಹುಲ್ ದ್ರಾವಿಡ್ ಅವರಿಗೆ ಸರಿಸಮನಾಗಿ ಪೈಪೋಟಿಯೊಡ್ಡುವವರೂ ಕಡಿಮೆ ಇದ್ದಾರೆ. ಆದರೆ, ಅವರು ಎರಡು ವರ್ಷಗಳ ಅವಧಿಯನ್ನು ಈಗಾಗಲೇ ಪೂರೈಸಿದ್ದಾರೆ. ಮುಂದುವರಿಸುವ ನಿಯಮ ಇಲ್ಲ. ಆದ್ದರಿಂದ ಸಂದರ್ಶನ ಪ್ರಕ್ರಿಯೆಯ ಮೂಲಕವೇ ಮರುನೇಮಕವಾಗಬೇಕು. ಆದ್ದರಿಂದ ಆಸಕ್ತರು ಅರ್ಜಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಲಾಗಿದೆ’ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.