ADVERTISEMENT

ಶ್ರೀಲಂಕಾ –ಭಾರತ ಸರಣಿ: ಅರ್ಜುನ್ ರಣತುಂಗಾ ಟೀಕೆ

ಪಿಟಿಐ
Published 2 ಜುಲೈ 2021, 15:21 IST
Last Updated 2 ಜುಲೈ 2021, 15:21 IST
ಅರ್ಜುನ್ ರಣತುಂಗಾ
ಅರ್ಜುನ್ ರಣತುಂಗಾ   

ಕೊಲಂಬೊ: ಭಾರತ ಮತ್ತು ಶ್ರೀಲಂಕಾ ನಡುವಣ ನಡೆಯಲಿರುವ ಸೀಮಿತ ಓವರ್‌ಗಳ ಸರಣಿಯ ಬಗ್ಗೆ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಭಾರತದ ಸೆಕೆಂಡ್ ಟೀಮ್ ಎದುರು ಸರಣಿ ಆಯೋಜಿಸಿರುವು ಸರಿಯಲ್ಲ. ಇದು ನಮ್ಮ ದೇಶಕ್ಕೆ ಅವಮಾನವೇ ಸರಿ‘ ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ರಣತುಂಗಾ ಕಿಡಿಕಾರಿದ್ದಾರೆ.

ಇದೇ 13ರಿಂದ ಶ್ರೀಲಂಕಾ ತಂಡವು ಶಿಖರ್ ಧವನ್ ನಾಯಕತ್ವದ ಭಾರತ ತಂಡದ ಎದುರು ಏಕದಿನ ಮತ್ತು ಟಿ20 ಸರಣಿಗಳಲ್ಲಿ ಆಡಲಿದೆ.

ADVERTISEMENT

‘ಟಿ.ವಿ. ಪ್ರಸಾರ ಮತ್ತು ಪ್ರಾಯೋಜಕತ್ವದ ಮಾರುಕಟ್ಟೆಗಾಗಿ ಶ್ರೀಲಂಕಾ ಮಂಡಳಿಯು ಈ ಸರಣಿ ಆಯೋಜನೆ ಮಾಡುತ್ತಿದೆ. ನಮ್ಮ ದೇಶದ ಸೀನಿಯರ್ ತಂಡದ ವಿರುದ್ಧ ಭಾರತದ ಎರಡನೇ ಹಂತದ ತಂಡವು ಆಡುವುದು ನಮಗೆ ಅವಮಾನದ ವಿಷಯ. ಸದ್ಯದ ಮಂಡಳಿಯ ಆಡಳಿತದ ಅದಕ್ಷತೆ ಪ್ರತೀಕ ಇದು‘ ಎಂದು ಟೀಕಿಸಿದ್ದಾರೆ.

‘ತನ್ನ ಶ್ರೇಷ್ಠ ಆಟಗಾರರ ತಂಡವನ್ನು ಭಾರತವು ಇಂಗ್ಲೆಂಡ್‌ಗೆ ಆಡಲು ಕಳಿಸಿದೆ. ಆ ತಂಡದವರಿಗಿಂತ ದುರ್ಬಲ ಆಟಗಾರರು ಇರುವ ಇಲ್ಲಿಗೆ ಕಳಿಸುತ್ತಿದೆ. ಅಂತಹ ತಂಡವು ನಮ್ಮ ಎದುರು ಆಡುತ್ತಿದೆ‘ ಎಂದು ಅಸಮಾಧಾನ ಹೊರಹಾಕಿದ್ದಾರೆ. 1996ರಲ್ಲಿ ವಿಶ್ವಕಪ್ ವಿಜೇತ ಶ್ರೀಲಂಕಾ ತಂಡಕ್ಕೆ ರಣತುಂಗಾ ನಾಯಕರಾಗಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯು, ‘ಸದ್ಯ ಇಲ್ಲಿ ಆಡಲು ಬಂದಿರುವ ಭಾರತ ತಂಡದಲ್ಲಿರುವ 20 ಆಟಗಾರರ ಪೈಕಿ 14 ಮಂದಿ ಅಂತರರಾಷ್ಟ್ರೀಯ ಮಟ್ಟದ ಎಲ್ಲ ಮೂರು ಮಾದರಿಗಳಲ್ಲಿ ಆಡಿದ್ದಾರೆ. ಇದು ದ್ವಿತೀಯ ದರ್ಜೆ ತಂಡವಲ್ಲ‘ ಎಂದಿದೆ.

ಭಾರತ ತಂಡದಲ್ಲಿ ಆರು ಮಂದಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರೂ ಆಗಿರುವ ರಾಹುಲ್ ದ್ರಾವಿಡ್ ಈ ತಂಡಕ್ಕೆ ಮುಖ್ಯ ಕೋಚ್ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.