
ಮಹಾರಾಷ್ಟ್ರ ವಿರುದ್ಧ ಆಕರ್ಷಕ ಶತಕ ಸಿಡಿಸಿದ ಮಯಾಂಕ್ ಅಗರವಾಲ್
ಪುಣೆ: ಎಚ್ಚರಿಕೆಯ ನಡೆ ಅನುಸರಿಸಿದ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದದಲ್ಲಿ ಮಹಾರಾಷ್ಟ್ರ ಎದುರು ಡ್ರಾ ಮಾಡಿಕೊಂಡಿತು. ಮೊದಲ ಇನಿಂಗ್ಸ್ ಮುನ್ನಡೆಯ ಮೂರು ಅಂಕ ಗಳಿಸಿತು.
ಮಂಗಳವಾರ ಮುಕ್ತಾಯವಾದ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ (103; 249ಎ, 4X8, 6X1) ಎರಡನೇ ಇನಿಂಗ್ಸ್ನಲ್ಲಿ ಶತಕ ಬಾರಿಸಿದರು. ಹಲವು ದಿನಗಳಿಂದ ಲಯಕ್ಕಾಗಿ ಪರದಾಡಿದ್ದ ಮಯಂಕ್ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಹೊಡೆದಿದ್ದರು. ಆದರೆ ಅಭಿನವ್ ಮನೋಹರ್ (96; 161ಎ, 4X11, 6X2) ಅಲ್ಪ ಅಂತರದಲ್ಲಿ ಶತಕ ಕೈತಪ್ಪಿಸಿಕೊಂಡರು. ಇವರಿಬ್ಬರ ಬ್ಯಾಟಿಂಗ್ನಿಂದಾಗಿ ಎರಡನೇ ಇನಿಂಗ್ಸ್ನಲ್ಲಿ ತಂಡವು 110 ಓವರ್ಗಳಲ್ಲಿ 8 ವಿಕೆಟ್ಗಳಿಗೆ 309 ರನ್ ಗಳಿಸಿತು. ಒಟ್ಟು 326 ರನ್ಗಳ ಮುನ್ನಡೆ ಸಾಧಿಸಿತು. ಮೊದಲ ಇನಿಂಗ್ಸ್ನಲ್ಲಿ ಕರ್ನಾಟಕ 13 ರನ್ಗಳ ಮುನ್ನಡೆ ಪಡೆದಿತ್ತು.
ಮಹಾರಾಷ್ಟ್ರ ತಂಡಕ್ಕೆ ಗುರಿಯೊಡ್ಡಿ ಗೆಲುವಿಗೆ ಪ್ರಯತ್ನಿಸುವ ಗೋಜಿಗೆ ಮಯಂಕ್ ಬಳಗ ಹೋಗಲಿಲ್ಲ. ಸೋಮವಾರ ದಿನದಾಟದ ಮುಕ್ತಾಯಕ್ಕೆ ಕರ್ನಾಟಕವು 5 ವಿಕೆಟ್ಗಳಿಗೆ 144 ರನ್ ಗಳಿಸಿತ್ತು.64 ರನ್ ಗಳಿಸಿದ್ದ ಮಯಂಕ್ ಕ್ರೀಸ್ನಲ್ಲಿದ್ದರು. ಮಂಗಳವಾರ ಆಟ ಮುಂದುವರಿಸಿದ ಅವರು ಈ ಟೂರ್ನಿಯಲ್ಲಿ ತಮ್ಮ ಮೊದಲ ಶತಕದ ಗಡಿ ದಾಟಿದರು. ಎದುರಾಳಿ ಬೌಲರ್ಗಳನ್ನು ಬಹಳ ಎಚ್ಚರಿಕೆಯಿಂದ ಎದುರಿಸಿದರು.
ಅಭಿನವ್ ಮನೋಹರ್ ಮತ್ತು ಶ್ರೇಯಸ್ ಗೋಪಾಲ್ ಏಳನೇ ವಿಕೆಟ್ ಜೊತೆಯಾಟದಲ್ಲಿ 92 ರನ್ ಸೇರಿಸಿದರು. ಇದರಿಂದಾಗಿ ತಂಡದ ಮೊತ್ತವು ಹೆಚ್ಚಿತು. ಸಮಯವೂ ಕಳೆಯಿತು. ವಿಕೆಟ್ ಉಳಿಸಿಕೊಂಡು ಆಡಿದ ಕರ್ನಾಟಕದ ಆಟಗಾರರು ಡ್ರಾದತ್ತ ವಾಲಿದರು.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್
ಕರ್ನಾಟಕ: 111 ಓವರ್ಗಳಲ್ಲಿ 313
ಮಹಾರಾಷ್ಟ್ರ: 99.2 ಓವರ್ಗಳಲ್ಲಿ 300.
ಎರಡನೇ ಇನಿಂಗ್ಸ್
ಕರ್ನಾಟಕ 110 ಓವರ್ಗಳಲ್ಲಿ 8ಕ್ಕೆ309 (ಮಯಂಕ್ ಅಗರವಾಲ್ 103, ಕೆ.ಎಲ್. ಶ್ರೀಜಿತ್ 29, ಅಭಿವನ್ ಮನೋಹರ್ 96, ಶ್ರೇಯಸ್ ಗೋಪಾಲ್ ಔಟಾಗದೇ 24, ಮುಕೇಶ್ ಚೌಧರಿ 70ಕ್ಕೆ3, ವಿಕಿ ಓಸ್ವಾಲ್ 49ಕ್ಕೆ2)
ಫಲಿತಾಂಶ ಡ್ರಾ. ಕರ್ನಾಟಕಕ್ಕೆ 3, ಮಹಾರಾಷ್ಟ್ರಕ್ಕೆ 1 ಅಂಕ.
ಪಂದ್ಯಶ್ರೇಷ್ಠ: ಶ್ರೇಯಸ್ ಗೋಪಾಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.