ಬೆಂಗಳೂರು: ಸುನಿಲ್ ನಾರಾಯಣ್ ಆಲ್ರೌಂಡರ್ ಆಟದ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಐಪಿಎಲ್ನಲ್ಲಿ ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿತು.
ಇದರೊಂದಿಗೆ ಐಪಿಎಲ್ನಲ್ಲಿ ಆರ್ಸಿಬಿಯ ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಕೂಡ ಭಗ್ನಗೊಂಡಿತು. ಕೊನೆಗೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಪ್ ಗೆಲ್ಲುವ ಆಸೆಯೂ ಈಡೇರಲಿಲ್ಲ.
ಆರ್ಸಿಬಿ ಈ ಸಾರಿಯೂ ಕಪ್ ಗೆಲ್ಲಲಿಲ್ಲ ಎಂಬ ತೀವ್ರ ನಿರಾಸೆಯಲ್ಲಿ ಅಭಿಮಾನಿಗಳಿದ್ದರೆ, ಆರ್ಸಿಬಿಯ ಕೆಲವು ವಿರೋಧಿಗಳು ಹಾಗೂ ಇನ್ನೂ ಕೆಲವರು ನಮ್ಮ ತಂಡ ಕಪ್ ಗೆಲ್ಲಲಿಲ್ಲ ಎಂದು ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಆಟಗಾರರನ್ನು ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ.
ಇದರಿಂದ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಆರ್ಸಿಬಿ ಆಟಗಾರ ಗ್ಲೇನ್ ಮ್ಯಾಕ್ಸವೆಲ್, 'ಈ ಸಾರಿಯ ಐಪಿಎಲ್ ಋತುವಿನಲ್ಲಿ ಆರ್ಸಿಬಿ ಪಯಣ ಅದ್ಭುತವಾಗಿತ್ತು. ಸ್ವಲ್ಪದರಲ್ಲೇ ನಾವು ಕಪ್ ಮಿಸ್ ಮಾಡಿಕೊಂಡೆವು. ಆದರೆ, ಕೆಲವರು ಸೋಶಿಯಲ್ ಮೀಡಿಯಾದಲ್ಲಿ ನಮ್ಮನ್ನು ನಿಂದಿಸಿ ಹಾಕುತ್ತಿರುವ ಪೋಸ್ಟ್ ನಿಜಕ್ಕೂ ಅಸಹ್ಯಕರ. ನಾವೂ ಕೂಡ ಮನುಷ್ಯರು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಿಬೇಕು. ದ್ವೇಷ ಹರಡುವ ಮುನ್ನ ಉತ್ತಮ ನಾಗರಿಕರಾಗಿ' ಎಂದು ಹೇಳಿದ್ದಾರೆ.
ಅಲ್ಲದೇ ತಮ್ಮನ್ನು ಬೆಂಬಲಿಸಿದ ಆರ್ಸಿಬಿ ಅಭಿಮಾನಿಗಳಿಗೆ ಮನದುಂಬಿ ಧನ್ಯವಾದ ಸಲ್ಲಿಸಿರುವ ಅವರು, 'ವಿರೋಧಿಗಳನ್ನು ನೀವು ಅನುಸರಿಸಬೇಡಿ' ಎಂದು ಸಲಹೆ ನೀಡಿದ್ದಾರೆ.
ಇನ್ನೊಂದೆಡೆ ಆರ್ಸಿಬಿ ಈ ಸಾರಿಯೂ ಸೋತರೂ ಮುಂದಿನ ಸಲ ಕಪ್ ನಮ್ದೆ ಎಂದು ಕಪ್ ಭಗ್ನ ಅಭಿಮಾನಿಗಳು ಅಭಿಯಾನ ಮುಂದುವರೆಸಿದ್ದಾರೆ.
ಕಪ್ ಗೆಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು, ನಾನು ನಾಯಕತ್ವ ಬಿಟ್ಟರೂ, ಕೊನೆವರೆಗೂ ಆರ್ಸಿಬಿಯಲ್ಲೇ ಆಡುತ್ತೇನೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.