ಆ್ಯಂಡಿ ಫ್ಲವರ್
(ಪಿಟಿಐ ಚಿತ್ರ)
ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವಲ್ಲಿ ಕೋಚ್ ಆ್ಯಂಡಿ ಫ್ಲವರ್ ಕೊಡುಗೆ ಅತ್ಯಂತ ನಿರ್ಣಾಯಕವೆನಿಸಿದೆ.
ಕೋಚ್ ಫ್ಲವರ್ ಹೋದಾಲೆಲ್ಲ ಟ್ರೋಫಿ ಹಿಂಬಾಲಿಸುತ್ತದೆ ಎಂದರೆ ತಪ್ಪಾಗಲಾರದು. ಈಗ ಆರ್ಸಿಬಿಗೂ ಕಪ್ ಗೆಲ್ಲಿಸಿಕೊಡುವ ಮೂಲಕ ಜಾದೂ ಮೆರೆದಿದ್ದಾರೆ.
ಆರ್ಸಿಬಿ ಗೆಲುವಿನ ಬಳಿಕ ಈ ಕುರಿತು ಸ್ವತಃ ಫ್ಲವರ್ ಅವರೇ ಮನಬಿಚ್ಚಿ ಮಾತನಾಡಿದ್ದಾರೆ.
'ಐಪಿಎಲ್ ಮೆಗಾ ಹರಾಜಿನ ಸಂದರ್ಭದಲ್ಲಿ ಬಲಿಷ್ಠ ಬೌಲಿಂಗ್ ಪಡೆಯನ್ನು ರೂಪಿಸುವುದು ನಮ್ಮ ಯೋಜನೆಯಾಗಿತ್ತು. ಇದುವೇ ಕಪ್ ಗೆಲ್ಲುವತ್ತ ಮಹತ್ತರ ಹೆಜ್ಜೆಯಾಗಿತ್ತು' ಎಂದು ಹೇಳಿದ್ದಾರೆ.
'ಬ್ಯಾಟರ್ಗಳಿಗೆ ದೊಡ್ಡ ಮೊತ್ತ ಖರ್ಚು ಮಾಡುವ ಬದಲು ಅನುಭಮಿ ಬೌಲರ್ಗಳತ್ತ ಆರ್ಸಿಬಿ ಗಮನ ಕೇಂದ್ರಿಕರಿಸಿತ್ತು. ಅತ್ಯುತ್ತಮ ಬೌಲಿಂಗ್ ಪಡೆಯನ್ನು ಹೊಂದುವುದರ ಮಹತ್ವವನ್ನು ಅರಿತುಕೊಂಡು ಆ ನಿಟ್ಟಿನಲ್ಲಿ ಹರಾಜಿಗೂ ಮೊದಲು ಯೋಜನೆ ರೂಪಿಸಲಾಯಿತು' ಎಂದು ಹೇಳಿದ್ದಾರೆ.
'ಹರಾಜಿನ ಮೊದಲ ದಿನದ ಬಳಿಕ ಟೀಕೆಗಳು ಎದುರಾಗಿದ್ದವು. ಹಣವನ್ನು ಖರ್ಚು ಮಾಡುವ ಬದಲು ಉಳಿಸಿಕೊಳ್ಳುತ್ತಿದ್ದೇವೆ ಎಂದು ಆಪಾದಿಸಲಾಗಿತ್ತು. ಆದರೆ ಎರಡನೇ ದಿನ ನಿಜಕ್ಕೂ ಉತ್ತಮ ಮೌಲ್ಯವನ್ನು ಪಡೆದೆವು. ಎರಡನೇ ದಿನದಲ್ಲಿ ಭುವಿ, ಕೃಣಾಲ್, ಟಿಮ್ ಡೇವಿಡ್, ರೊಮರಿಯೊ ಶೆಫಾರ್ಡ್ ಮುಂತಾದ ಆಟಗಾರರನ್ನು ಪಡೆದೆವು. ನಮ್ಮ ಪಾಲಿಗದು ಮಹತ್ವದೆನಿಸಿಕೊಂಡಿತು' ಎಂದು ಹೇಳಿದ್ದಾರೆ.
'ಅನುಭವಿ ಆಟಗಾರರ ಮಿಶ್ರಣ ನಮ್ಮ ತಂಡದಲ್ಲಿತ್ತು. ವಿರಾಟ್ , ಜೋಶ್, ಕೃಣಾಲ್ ಅನುಭವಿ ಆಟಗಾರರಾಗಿದ್ದಾರೆ. ಹ್ಯಾಜಲ್ವುಡ್ ವಿಶ್ವಕಪ್ ಫೈನಲ್ ಆಡಿದ್ದಾರೆ. ಕೃಣಾಲ್ ನಾಲ್ಕನೇ ಸಲ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ. ಹಾಗಾಗಿ ಐಪಿಎಲ್ ಹರಾಜು ಟ್ರೋಫಿ ಗೆಲ್ಲುವ ನಮ್ಮ ದಿಶೆಯತ್ತ ಮಹತ್ತರ ಹೆಜ್ಜೆಯಾಗಿತ್ತು' ಎಂದು ವಿವರಿಸಿದ್ದಾರೆ.
'ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ನಿಭಾಯಿಸಿದ ಜವಾಬ್ದಾರಿಯನ್ನು ಫ್ಲವರ್ ಕೊಂಡಾಡಿದ್ದಾರೆ. ಭಾರತದ ಕುರಿತು ಜ್ಞಾನ ಹಾಗೂ ಅರಿವು ಅತ್ಯಂತ ಮುಖ್ಯವೆನಿಸಿತು. ದಿನೇಶ್ ಮಹತ್ತರ ಪರಿಣಾಮವನ್ನು ಬೀರಿದ್ದಾರೆ' ಎಂದು ಹೇಳಿದ್ದಾರೆ.
ಮತ್ತೊಂದೆಡೆ ವಿರಾಟ್ ಕೊಹ್ಲಿ ಸಹ ಆರ್ಸಿಬಿ ಟ್ರೋಫಿ ಗೆಲ್ಲಲು ಬೌಲರ್ಗಳ ಪಾತ್ರ ನಿರ್ಣಾಯಕವೆನಿಸಿತು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.