ನವದೆಹಲಿ: ಮಹೇಂದ್ರಸಿಂಗ್ ಧೋನಿ ಅವರು ಕಿರಿಯ ಆಟಗಾರರಿಗೆ ಮಾರ್ಗದರ್ಶನ ನೀಡುವ ರೀತಿಯು ವಿಶೇಷವಾಗಿದೆ. ಆವರು ಯಾವುದೇ ಸಮಸ್ಯೆಗೆ ಪೂರ್ತಿ ಪರಿಹಾರ ಹೇಳುವುದಿಲ್ಲ. ಆದರೆ,ಅವರು ಹೇಳುವ ಅಪೂರ್ಣ ಸಲಹೆಯನ್ನು ಸರಿಯಾಗಿ ಪಾಲಿಸಿದರೆ ಸಂಪೂರ್ಣ ಪರಿಹಾರ ಖಚಿತವಾಗಿರುತ್ತದೆ ಎಂದು ಭಾರತ ತಂಡದ ಆಟಗಾರ ರಿಷಭ್ ಪಂತ್ ಹೇಳಿದ್ದಾರೆ.
‘ಕ್ರೀಡಾಂಗಣದಲ್ಲಿ ಮತ್ತು ಹೊರಗೆ ಧೋನಿ ನನ್ನ ಮಾರ್ಗದರ್ಶಕರು. ನನಗೆ ಯಾವುದೇ ಸಮಸ್ಯೆಯಿದ್ದಾಗಲೂ ಅವರನ್ನು ಸಂಪರ್ಕಿಸುತ್ತೇನೆ. ಅವರು ಯಾವಾಗಲೂ ಸಂಪೂರ್ಣ ಪರಿಹಾರ ಸೂಚಿಸುವುದಿಲ್ಲ. ಆದರೆ ಸವಾಲನ್ನು ನಾವಾಗಿಯೇ ಪರಿಹರಿಸಿಕೊಳ್ಳುವ ಮಾರ್ಗವನ್ನು ಸೂಚ್ಯವಾಗಿ ಹೇಳಿರುತ್ತಾರೆ. ನಾವು ಸಮಸ್ಯೆ ಪರಿಹರಿಸುವಲ್ಲಿ ಸ್ವಾವಲಂಭಿಗಳಾಗಬೇಕು ಎಂಬುದೇ ಅವರ ಉದ್ದೇಶ’ ಎಮಂದು ಪಂತ್ ಇನ್ಸ್ಟಾಗ್ರಾಮ್ನಲ್ಲಿ ಹೇಳಿದ್ದಾರೆ.
‘ಮಹಿಭಾಯ್ ಕ್ರೀಸ್ನಲ್ಲಿದ್ದಾರೆಂದರೆ ಅವರ ತಲೆಯಲ್ಲಿ ಒಂದು ಯೋಜನೆ ಖಚಿತವಾಗಿರುತ್ತದೆ. ಇನ್ನೊಂದು ತುದಿಯಲ್ಲಿರುವ ನಾವು ಮಾಡಬೇಕಾಗಿರುವುದು ಅವರನ್ನು ಅನುಸರಿಸುವುದು ಮಾತ್ರ. ಅವರೊಂದಿಗೆ ಬ್ಯಾಟಿಂಗ್ ಮಾಡುವುದು ನನಗೆ ಅಚ್ಚುಮೆಚ್ಚಿನ ಕೆಲಸ’ ಎಂದು ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಆಡುವ ರಿಷಭ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.